ಬೆಂಗಳೂರು: ಕಾವೇರಿ ವೆಬ್ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಟಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿ ಮುದ್ರಾಂಕ ಇಲಾಖೆಯ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ಆಯುಕ್ತರ ಮೇಲೆ ಸಬ್ ರಿಜಿಸ್ಟ್ರಾರ್ಗಳು ಒತ್ತಡ ಹೇರುತ್ತಿದ್ದಾರಾ? ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ತನಿಖಾ ಮಾಹಿತಿ ಕೋರಿ ಪತ್ರ ಬರೆದರೂ ಈವರೆಗೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ಗಳು ಒತ್ತಡ ಹೇರಿದ್ದಾರಾ ಎಂಬ ಗುಮಾನಿ ಆರಂಭವಾಗಿದೆ.
ಪ್ರಕರಣ ಸಂಬಂಧ ಬಿಲ್ಡರ್ ಸೋಮಣ್ಣ ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ವಿಚಾರಣೆ ಚುರುಕುಗೊಳಿಸಿದ್ದಾರೆ. ದಾಸನಪುರ ಹಾಗೂ ಲಗ್ಗೆರೆಯ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ರೈತರ ಜಮೀನುಗಳನ್ನು ರೆವಿನ್ಯೂ ಸೈಟ್ಗಳಾಗಿ ಪರಿವರ್ತಿಸಿ, ಸೂಕ್ತ ಬೆಲೆ ನೀಡುವುದಾಗಿ ಹೇಳಿ ವಂಚಿಸುತ್ತಿದ್ದನಂತೆ. ಜೊತೆಗೆ ಭೂ ಖರೀದಿಗಾರರಿಗೆ ರೆವಿನ್ಯೂ ಸೈಟ್ ಎಂದು ಹೇಳಿಕೊಂಡು ಮಾರಾಟ ಮಾಡುತ್ತಿದ್ದ. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದಿನ 40 ಸೈಟ್ಗಳನ್ನು ರಿಜಿಸ್ಟ್ರಾರ್ ಮಾಡಿಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.