ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ 200 ಆ್ಯಂಬುಲೆನ್ಸ್ಗಳ ವ್ಯವಸ್ಥೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಪ್ರಾಥಮಿಕ ಹಂತದಲ್ಲಿ 100 ಆ್ಯಂಬುಲೆನ್ಸ್ ಒದಗಿಸುವಂತೆ ನಗರ ಪೊಲೀಸ್ ಇಲಾಖೆಗೆ ಸೂಚಿಸಿತ್ತು.
ಇದರಂತೆ ಕಾರ್ಯೋನ್ಮುಖವಾಗಿರುವ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳು, ಇಂದು ಖಾಸಗಿ ಟೆಂಪೋ ಟ್ರಾವೆಲ್ಸ್ (ಟಿಟಿ) ಮಾಲೀಕರೊಂದಿಗೆ ಮಾತನಾಡಿ 100 ಟಿಟಿಗಳನ್ನು ಆ್ಯಂಬುಲೆನ್ಸ್ಗಳಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ.
![ಆಂಬ್ಯುಲೆನ್ಸ್ಗಳಾಗಿ ಬದಲಾದ ಟೆಂಪೋ ಟ್ರಾವೆಲರ್ಗಳು](https://etvbharatimages.akamaized.net/etvbharat/prod-images/kn-bng-03-tt-trafic-police-7202806_17072020204207_1707f_1594998727_823.png)
ಇಂದು ಪ್ರಾಥಮಿಕ ಹಂತವಾಗಿ 20 ಟಿಟಿಗಳನ್ನು ಆ್ಯಂಬುಲೆನ್ಸ್ಗಳಾಗಿ ಪರಿವರ್ತಿಸಲಾಗಿದೆ. ಕೆಲವೇ ದಿನಗಳಲ್ಲಿ 80 ಆ್ಯಂಬುಲೆನ್ಸ್ಗಳು ಸಿದ್ಧವಾಗಲಿವೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.
ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಸಿಗದೆ ಹಲವು ಮಂದಿ ಸೋಂಕಿತರು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಹೀಗಾಗಿ ಇಂದು ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ತ್ವರಿತಗತಿಯಲ್ಲಿ ಆ್ಯಂಬುಲೆನ್ಸ್ಗಳ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕೆಂದು ಸಂಚಾರಿ ಪೊಲೀಸರಿಗೆ ಸರ್ಕಾರ ತಿಳಿಸಿತ್ತು.