ತುಮಕೂರು: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ನಗರದೆಲ್ಲೆಡೆ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶಿವಸಿದ್ದೇಶ್ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದರು.
ಜಾತ್ರೆಯ ಪ್ರಯುಕ್ತ ವಾಡಿಕೆಯಂತೆ ಪ್ರತಿ ವರ್ಷ ತುಮಕೂರು ನಗರದ ಮಂಡಿಪೇಟೆ ಸೇರಿದಂತೆ ವಿವಿಧೆಡೆ ಭಿಕ್ಷಾಟನೆ ನಡೆಸಲಾಗುತ್ತದೆ. ಅದೇ ರೀತಿ, ಈ ಬಾರಿಯೂ ಭಿಕ್ಷಾಟನೆ ನಡೆಸಿದ ಸಿದ್ದಗಂಗಾ ಮಠದ ಶ್ರೀಗಳು, ಭಕ್ತರು, ವರ್ತಕರಿಂದ ದವಸ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸ್ವೀಕರಿಸಿದರು.
ಸ್ವಾಮೀಜಿಗಳು ನಗರದ ಮಂಡಿಪೇಟೆ, ಅಶೋಕ್ ರಸ್ತೆ, ಎಪಿಎಂಸಿ ಯಾರ್ಡ್ಗಳಲ್ಲಿ ಭಿಕ್ಷಾಟನೆ ಮಾಡಿದರು. ಅಕ್ಕಿ, ರಾಗಿ, ತೊಗರಿ ಬೆಳೆ, ಬೆಲ್ಲ ಕಾಣಿಕೆ ಕೊಟ್ಟು ಭಕ್ತರು ಕೃತಾರ್ಥರಾದರು.
ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, "ಫೆ.20ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯದೊಂದಿಗೆ ಈ ರೀತಿ ಭಿಕ್ಷಾಟನೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ" ಎಂದು ತಿಳಿಸಿದರು.
ಸಿದ್ದಗಂಗಾ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ಇದನ್ನೂ ಓದಿ: ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡ ಸರ್ವ ಧರ್ಮ ಗುರುಪರಂಪರೆ - FLOWER SHOW EXHIBITION