ಬೆಂಗಳೂರು: ಸುಮಾರು 75 ದಿನಗಳ ನಂತರ ಇಂದು ನಗರದ ಬಹುತೇಕ ದೇವಾಲಯಗಳು ಭಕ್ತರ ಪ್ರವೇಶಕ್ಕೆ ಬಾಗಿಲು ತೆರೆದಿವೆ.
ಭಕ್ತಾದಿಗಳು ದೇವರ ದರ್ಶನ ಪಡೆಯಲು ದೇವಾಲಯ ಆಡಳಿತ ಮಂಡಳಿಗಳು ಸಕಲ ಸಿದ್ಧತೆ ಮಾಡಿವೆ. ಸ್ಯಾನಿಟೈಸಿಂಗ್, ಸ್ಕ್ರೀನ್ ಟೆಸ್ಟಿಂಗ್ ನಂತರವಷ್ಟೇ ದೇವಾಲಯಗಳ ಒಳಗೆ ಪ್ರವೇಶ ನೀಡಲಾಗಿದೆ. ನಗರದ ಬನಶಂಕರಿ, ಟಿಟಿಡಿ ದೇವಸ್ಥಾನ, ಗವಿಗಂಗಾಧರೇಶ್ವರ, ದೊಡ್ಡ ಗಣಪತಿ, ಸೇರಿದಂತೆ ಹಲವು ದೇವಾಲಯಗಳಲ್ಲಿ ಇಂದು ಭಕ್ತರಿಗೆ ದೇವರ ದರ್ಶನ ಸಿಗುತ್ತಿದೆ.
ಆದರೆ ಮೊದಲ ದಿನವಾದ್ದರಿಂದ ಇಂದು ಬೆರಣಿಕೆ ಜನರು ಮಾತ್ರ ದೇವಾಲಯಗಳಿಗೆ ಆಗಮಿಸುತ್ತಿದ್ದಾರೆ. ಬನಶಂಕರಿ ಹಾಗೂ ಮಲ್ಲೇಶ್ವರಂನ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭಕ್ತಾದಿಗಳು ಕಂಡುಬಂದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಂಡಿದ್ದು, ಬಂದಂತಹ ಭಕ್ತಾದಿಗಳ ವಿವರಣೆ ಪಡೆದು ಟಿಟಿಡಿ ಸಿಬ್ಬಂದಿ ಭಕ್ತರನ್ನು ಒಳಗೆ ಬಿಟ್ಟರು. ಕಾಡು ಮಲೆಮಾದೇಶ್ವರ ದೇವಾಲಯದಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕ್ ವ್ಯವಸ್ಥೆ ಮಾಡಲಾಗಿತ್ತು. ಹಲವು ವರ್ಷಗಳ ಇತಿಹಾಸವುಳ್ಳ ಮಲೆ ಮಾದೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ವಿಶೇಷ ಪೂಜೆ ನೋಡುವ ಭಾಗ್ಯ ದೊರೆಯಿತು.
ಇಂದು ಬೆಳಗ್ಗೆ 6:50 ರ ಸುಮಾರಿಗೆ ದೇವಾಲಯ ತೆರೆದಿರುವುದರಿಂದ ರುದ್ರಾಭಿಷೇಕ ಮಾಡಲಾಯಿತು. ದೇವಾಲಯದ ಮುಂಭಾಗ ಬ್ಯಾರಿಕೇಡ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಒಟ್ಟಾರೆ ದೇವಾಲಯಗಳಲ್ಲಿ ಸಾಮಾಜಿಕ ಅಂತರ, ಟೆಸ್ಟಿಂಗ್ ನಂತರವೇ ಒಳಗೆ ಬಿಡಲಾಗುತ್ತಿದೆ.