ಬೆಂಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಒಟ್ಟು 42 ಉತ್ತಮ ಶಿಕ್ಷಕರು, ಪ್ರಾಂಶುಪಾಲರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.
2019-20 ನೇ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 20 ಶಿಕ್ಷರಿಗೆ, ಪ್ರೌಢಶಾಲಾ ವಿಭಾಗದ 11 ಶಿಕ್ಷಕರಿಗೆ, ಉತ್ತಮ ಪ್ರಾಂಶುಪಾಲರಾಗಿ ಇಬ್ಬರಿಗೆ, ಹಾಗೂ ಉತ್ತಮ ಉಪನ್ಯಾಸಕರಾಗಿ 8 ಮಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಉತ್ತಮ ಶಿಕ್ಷಕರಿಗೆ ತಲಾ ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೆ ಹಿರಿಯ ಪ್ರಾಥಮಿಕ ಕುಂದಗೋಳ ಶಾಲೆ, ಧಾರವಾಡ ಹಾಗೂ ಅಂಕೋಲ ತಾಲೂಕಿನ, ಉತ್ತರಕನ್ನಡದ ಪ್ರೌಢ ಶಾಲೆಯನ್ನು ಉತ್ತಮ ಶಾಲೆಗಳೆಂದು ಪ್ರಶಸ್ತಿ ನೀಡಿ, ಶಾಲೆ ಅಭಿವೃದ್ಧಿಗೆ ಎರಡುವರೇ ಲಕ್ಷ ರೂ ದೇಣಿಗೆ ನೀಡಲಾಯಿತು.
ಇದೇ ವೇಳೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಒಂದು ದಿನದ ವೇತನ ಸಂಗ್ರಹಿಸಿ, 50 ಕೋಟಿ ರುಪಾಯಿ ಉತ್ತರ ಕರ್ನಾಟಕದ ನೆರೆ ಹಾವಳಿಗೆ ಪರಿಹಾರ ನಿಧಿಯಾಗಿ ನೀಡಲಾಯಿತು. ಈ ಹಣದಲ್ಲಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಪುಸ್ತಕ ವಿತರಣೆಗೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಶಿಕ್ಷಕ ಮತ್ತು ಶಿಕ್ಷಣ ಇರುವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸಲು, ಶಿಕ್ಷಕರು ನೀಡಿದ ಬರಪರಿಹಾರ ನಿಧಿಯನ್ನು ಶಾಲಾ ಕಾಲೇಜುಗಳ ಕಟ್ಟಡ, ಮೂಲಭೂತ ಸೌಕರ್ಯಗಳನ್ನು ನೀಡಲು ದೇಣಿಗೆಯನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಕಥೆ ಭಕ್ತ ಕುಂಬಾರನ ಕಥೆಯಾಗಿದೆ. ಕಡ್ಡಾಯ ವರ್ಗಾವಣೆ ಮಾಡಿದ್ದಾರೆ. ಈ ಇಲಾಖೆಗೆ ಮನುಷ್ಯತ್ವ ಇರುವ ಅಧಿಕಾರಿಗಳನ್ನು ಕೊಡಿ. ಗ್ರಾಮೀಣ ಪ್ರದೇಶ, ನಗರ ಪ್ರದೇಶ ಅಂತ ವಿಭಾಗ ಮಾಡಿ ಶಿಕ್ಷಕರಿಗೆ ಹಿಂಸೆ ಕೊಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿ ಭ್ರಷ್ಟಾಚಾರ ಮುಕ್ತ ಇಲಾಖೆಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮಾತನಾಡಿ, ವರ್ಗಾವಣೆ ನೀತಿಗೆ ಕಾಯ್ದೆಯಲ್ಲಿ ಬದಲಾವಣೆ ತರಬೇಕಿದೆ. ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು, ಆದ್ರೆ ನಾಳೆಯಿಂದ ಅದಕ್ಕೆ ಮತ್ತೆ ಚಾಲನೆ ಸಿಗಲಿದೆ. ಕಡ್ಡಾಯ ವರ್ಗಾವಣೆ ಪದ ಬಹಳ ತಪ್ಪು. ಮೊದಲು ಈ ಪದ ತೆಗೆದು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಮೇಲ್ಮನೆ ಸದಸ್ಯರ ಸಮಿತಿ ರಚಿಸಿ ತೀರ್ಮಾನ ಮಾಡಲಾಗುವುದು ಎಂದರು.