ಆನೇಕಲ್: ಇಲ್ಲಿನ ಚಂದಾಪುರ- ಆನೇಕಲ್ ಮುಖ್ಯ ರಸ್ತೆ ಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಪುರಸಭೆ ಮುಂದಾಗಿದ್ದು, ಇದನ್ನು ಖಂಡಿಸಿ ಸಣ್ಣ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಚಂದಾಪುರ-ಆನೇಕಲ್ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವ್ಯಾಪಾರಿಗಳ ಮೇಲೆ ಪುರಸಭೆ ಏಕಾಏಕಿ ಜೆಸಿಬಿಗಳ ಮೂಲಕ ಬದುಕನ್ನು ಕಸಿದು ಬೀದಿಗೆ ತಳ್ಳಿವೆ. ಸಾಕಷ್ಟು ಕಿರುಕುಳಗಳ ನಡುವೆಯೂ ಅರೆ ಹೊಟ್ಟೆಗೆ ಗಂಜಿ ಸಂಪಾದಿಸುತ್ತಿದ್ದವರಿಗೆ ಇದೀಗ ಪುರಸಭೆ ಶಾಕ್ ನೀಡಿದ್ದು, ಪುರಸಭೆ ಅಧಿಕಾರಿಗಳು ಫುಟ್ಪಾತ್ ಒತ್ತುವರಿ ಎಂಬ ಕಾರಣಗಳನ್ನು ಹೇಳಿ ರಸ್ತೆ ಪಕ್ಕದಲ್ಲಿರುವ ಸಣ್ಣ ಸಣ್ಣ ವ್ಯಾಪಾರ ಮಾಡುವ ಅಂಗಡಿಗಳ ತೆರವಿಗೆ ಮುಂದಾಗಿದೆ.
ಯಾವುದೇ ನೋಟಿಸ್ ನೀಡದೆ ಏಕಾಏಕಿ ಜೆಸಿಬೆಗಳನ್ನು ತಂದು ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದು, ದಿಕ್ಕು ತೋಚದೆ ವ್ಯಾಪಾರಿಗಳು ಪುರಸಭೆ ಮುಂದೆ ಇಐಟಿಯು ಸಂಘಟನೆಯ ಬೆಂಬಲಿಗರೊಂದಿಗೆ ಪ್ರತಿಭಟನೆಗಿಳಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು ವ್ಯಾಪಾರಿಗಳು ರಾತ್ರಿವರೆಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಚಂದಾಪುರ ಅಧ್ಯಕ್ಷರು ಸಮಸ್ಯೆಯನ್ನು ಮಾತುಕತೆ ನಡೆಸುಚ ಮೂಲಕ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಮುಂದೂಡಲಾಯಿತು.