ಬೆಂಗಳೂರು: ದಕ್ಷಿಣ ಭಾರತದ ಭಾಷಾ ಸಂಘಟನೆಗಳಾದ ಹಲ್ಮಿಡಿ ಕೂಟ, ದ್ರಾವಿಡಿಯನ್ ಫೋರಂ ಮತ್ತು ವಿಆರ್ ಸೌತ್ ಇಂಡಿಯನ್ಸ್ನ ಯುವಕರು ಹಿಂದಿ ಹೇರಿಕೆ ವಿರೋಧಿಸಿ ಕೆಂದ್ರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲು ಸಜ್ಜಾಗಿದ್ದಾರೆ.
ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುತ್ತಿದೆ. ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಭಾಷಾ ಸಮಾನತೆ ನೀತಿಗೆ ವಿರುದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾಷಾ ವಿಷಯದಲ್ಲಿ ನ್ಯಾಯ ಸಿಗಬೇಕಾದರೇ ಹೈಕೋರ್ಟ್ನಲ್ಲಿ ಪ್ರಾದೇಶಿಕ ಭಾಷೆ ಬಳಕೆ ಆಗಬೇಕು. ಆದರೆ, ಅದು ಆಗುತ್ತಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ನೀಟ್ ಪರೀಕ್ಷೆಯನ್ನು ನಮ್ಮದಲ್ಲದ ಭಾಷೆಯಲ್ಲಿ ನಡೆಸುತ್ತಿರುವುದರಿಂದ ಬಹುತೇಕರು ಆಯ್ಕೆ ಆಗುತ್ತಿಲ್ಲ ಎಂದು ಹಲ್ಮಿಡಿ ಒಕ್ಕೂಟದ ಮುಖಂಡ ಕೆ.ಎನ್. ವಿಜೇಂದ್ರ ಆರೋಪಿಸಿದ್ದಾರೆ.
ಉತ್ತರ ಭಾರತದವರ ಕೇವಲ ಎರಡು ಭಾಷೆಗಳನ್ನು ಮಾತ್ರ ಕಲಿಯುತ್ತಾರೆ. ಆದರೆ, ನಾವು ಮೂರು ಭಾಷೆಗಳನ್ನು ಅಭ್ಯಾಸ ಮಾಡಬೇಕು. ಇದರಿಂದಾಗಿ ನಮ್ಮ ಕಲಿಕೆಯಲ್ಲಿ ಅನೇಕ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಸ್ಪರ್ಧಾತ್ಮಕ ಅಂಕಗಳಲ್ಲಿ ತಾರತಮ್ಯ ಕಂಡುಬಂದು ಉದ್ಯೋಗಿಗಳ ಪ್ರಮಾಣ ಕುಸಿಯುತ್ತಿದೆ ಎಂದು ಹೇಳಿದರು.