ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಗಡ್ಡಕ್ಕೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಫಿದಾ ಆಗಿದ್ದಾರೆ. ಅಲ್ಲದೆ ಹಾಗೆಯೇ ಉಳಿಸಿಕೊಳ್ಳಿ ಚೆನ್ನಾಗಿದೆ ಅಂತ ಸಲಹೆಯನ್ನು ನೀಡಿದ್ದಾರೆ.
ಆ ರಾಷ್ಟ್ರೀಯ ನಾಯಕರು ಬೇರೆ ಯಾರು ಅಲ್ಲ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ. ನಿಜ, ಡಿಕೆ ಶಿವಕುಮಾರ್ ಅವರ ಈಗಿನ ಲುಕ್ಗೆ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರು ಶಹಭಾಶ್ಗಿರಿ ನೀಡಿದ್ದಾರೆ. ತಿಹಾರ್ ಜೈಲಿನಿಂದ ಹೊರಬರುವ ಸಂದರ್ಭದಲ್ಲಿ ಇವರು ಬಿಟ್ಟಿದ್ದ ಗಡ್ಡದ ಬಗ್ಗೆ ಉಭಯ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಗಡ್ಡ ಬಿಟ್ಟಿರುವುದು ಚೆನ್ನಾಗಿದೆ ಎಂದಿದ್ದಾರೆ.
ಯಾವಾಗ ಹೇಳಿದ್ದು?
ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ದಿಲ್ಲಿಯಲ್ಲಿ ಸೋನಿಯಾ, ರಾಹುಲ್ರನ್ನು ಡಿಕೆಶಿ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಡಿಕೆಶಿಗೆ ರಾಷ್ಟ್ರೀಯ ನಾಯಕರು ಸಲಹೆ ನೀಡಿದ್ದಾರೆ. ಸೌಹಾರ್ದ ಭೇಟಿ ವೇಳೆ ಗಡ್ಡದ ವಿಚಾರವೂ ಪ್ರಸ್ತಾಪವಾಗಿದೆ. ನಿಮಗೆ ಈ ಗಡ್ಡ ಒಪ್ಪುತ್ತದೆ. ಇದನ್ನ ಹೀಗೆ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಗಡ್ಡದ ವಿಚಾರದಲ್ಲಿ ಡಿಕೆಶಿ ಸದ್ಯ ಗೊಂದಲದಲ್ಲಿದ್ದಾರೆ. ಏಕೆಂದರೆ ಜೈಲಿನಲ್ಲಿದ್ದ ಸಂದರ್ಭ ಹೊತ್ತಿದ್ದ ಹರಕೆಯ ಕಾರಣ ಅವರು ಗಡ್ಡ ಉಳಿಸಿಕೊಂಡಿದ್ದು, ಹರಕೆ ತೀರಿಸುವ ಸಲುವಾಗಿ ಅವರನ್ನು ತೆಗೆಯಲೇ ಬೇಕಾಗಿದೆ. ಆದರೆ ರಾಷ್ಟ್ರೀಯ ನಾಯಕರ ಸಲಹೆ ಪಾಲಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಡಿಕೆಶಿ ಗಡ್ಡ ಬೆಳೆಸುವ ಪ್ರವೃತ್ತಿಗೆ ಮುಂದಾದರೂ ಅಚ್ಚರಿಯಿಲ್ಲ.
ಡಿಕೆ ಶಿವಕುಮಾರ್ ಅವರ ಈಗಿನ ಲುಕ್ ಬಗ್ಗೆ ಹೆಚ್ಚಿನ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಿಂದೆಗಿಂತಲೂ ಈಗ ಹೆಚ್ಚು ಅಂದವಾಗಿ ಕಾಣುತ್ತಿದ್ದೀರಿ ಎಂದು ಹಲವರು ಪ್ರಶಂಸಿಸಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಾರೆ ಕಳೆದ ಒಂದು ವಾರದಿಂದ ಕಾಣಸಿಗುತ್ತಿರುವ ಡಿಕೆಶಿ ಲುಕ್ ಮುಂದಿನ ದಿನಗಳಲ್ಲಿ ಕಾಯಂ ಆಗಿ ಕಂಡರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.