ಬೆಂಗಳೂರು: ಗಗನಸಖಿಯರು ಅಂದ್ರೆ ಮಾಡೆಲ್ ರೀತಿಯಲ್ಲಿ ಕಾಣುತ್ತಾರೆ, ಅವರದ್ದು ಐಷಾರಾಮಿ ಜೀವನಶೈಲಿ, ವಿಮಾನದಲ್ಲಿ ಹಾರಾಡುತ್ತಾರೆ. ಹೀಗೆ ಹತ್ತಾರು ಕಲ್ಪನೆಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಇದಕ್ಕೆಲ್ಲ ಅಪವಾದ ಎನ್ನುವಂತೆ, ಬದುಕಿನಲ್ಲಿ ಭಿನ್ನವಾದ ಹೆಜ್ಜೆ ಇಟ್ಟವರು ಅನಿತಾ ರಾವ್.
ಗಗನಸಖಿಯಾಗಿದ್ದಾಗಲೇ ಅನಿತಾಗೆ ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲೇಬೇಕು ಎನ್ನುವ ಕನಸು ಇತ್ತು. ಆದರೆ, ಆಕಾಶದಲ್ಲಿ ಹಾರಾಡಿಕೊಂಡು ಈ ಕೆಲಸ ಮಾಡೋಕೆ ಸಾಧ್ಯ ಇಲ್ಲ ಎನಿಸಿದಾಗ ಕೆಲಸ ಬಿಟ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ಅದಕ್ಕೆಂದೇ "ಸಕ್ರಿಯಾ" ಸಂಸ್ಥೆ ಸ್ಥಾಪಿಸಿದರು.
ಅನಿತಾ ಅವರಿಗೆ ಚಿಕ್ಕಂದಿನಿಂದ ಕಾಡಿದ ವಿಷಯ ಅಂದ್ರೆ "ಮುಟ್ಟು". ಹೆಣ್ಣುಮಕ್ಕಳಿಗೆ ತಿಂಗಳಿಗೊಮ್ಮೆ ಆಗುವ ಒಂದು ಸಾಮಾನ್ಯ ಕ್ರಿಯೆ. ಆದರೂ ಈ ಸಮಯದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಏನೆಲ್ಲಾ ಆಗಬಹುದು ಎಂಬುದನ್ನು ಕಣ್ಣಾರೆ ಕಂಡಿದ್ದರು. ಈ ಹಾದಿಯಲ್ಲಿ ಏನಾದರೂ ಮಾಡಲೇಬೇಕು, ಜನರಿಗೆ ಅರಿವು ಮೂಡಿಸಲೇಬೇಕು ಎಂದು ಪಣತೊಟ್ಟು 2017ರಲ್ಲಿ "ಸಕ್ರಿಯಾ" ಸಂಸ್ಥೆ ಸ್ಥಾಪಿಸಿದರು. ಸರ್ಕಾರೇತರ ಸಂಸ್ಥೆ ಮೂಲಕ ಕೆಲಸಕ್ಕೆ ಇಳಿದರು. ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ಹೋದರು. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಸರ್ಕಾರಿ ಶಾಲೆ, ಕಾಲೇಜುಗಳು, ಆಸ್ಪತ್ರೆಗಳು ಹಾಗೂ ರಾಜ್ಯದ ಕೆಲವು ಜೈಲುಗಳ ಮಹಿಳಾ ಖೈದಿಗಳನ್ನೂ ಭೇಟಿಯಾದರು. ರಾಜ್ಯ ಸಂಚಾರದ ಬಳಿಕ ಅನಿತಾ ರಾವ್ ಅವರು ಸಂಪೂರ್ಣವಾಗಿ ದಿಗ್ಭ್ರಾಂತಿಗೆ ಒಳಗಾಗಿದ್ದರು. ನಮ್ಮ ಜನರಲ್ಲಿ ಇಷ್ಟು ಮೂಢನಂಬಿಕೆ ಇದ್ಯಾ ಅನ್ನುವ ವಿಷಯವನ್ನು ಅವರಿಗೆ ಅರಗಿಸಿಕೊಳ್ಳೋಕೆ ಆಗಿಲ್ಲ. ಕೆಲವು ಮಹಿಳೆಯರಿಗೆ ಒಳ ಉಡುಪು ಧರಿಸಬೇಕು ಎನ್ನುವ ಜ್ಞಾನವೇ ಇರಲಿಲ್ಲ. ಇನ್ನು ಕೆಲವರು ಮುಟ್ಟಿನ ಸಮಯದಲ್ಲಿ ಎಲೆ ಬಳಸುತ್ತಿದ್ದರು. ಇನ್ನು ಕೆಲವರು ಬಟ್ಟೆ. ಇದೆಲ್ಲ ನೋಡಿದ ಅನಿತಾ ಅವತ್ತೇ ನಿರ್ಧಾರ ಮಾಡಿದರು. ಹಳ್ಳಿ -ಹಳ್ಳಿ, ಶಾಲೆ- ಕಾಲೇಜುಗಳಿಗೆ ಹೋಗಿ ಸ್ಯಾನಿಟರಿ ನ್ಯಾಪ್ಕಿನ್ಗಳ ಬಗ್ಗೆ ಜಾಗೃತಿ ಮೂಡಿಸಿದರು. ಉಚಿತವಾಗಿ ಮಹಿಳೆಯರಿಗೆ ಒಳ ಉಡುಪು, ಪ್ಯಾಡ್ಗಳನ್ನು ಹಂಚಿ ಇದನ್ನು ಬಳಸುವಂತೆ ಅರಿವು ತುಂಬಿದರು. 10 ಸಾವಿರಕ್ಕಿಂತ ಹೆಚ್ಚು ಹೆಣ್ಣುಮಕ್ಕಳನ್ನು ಅನಿತಾ ಅವರು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. 150ಕ್ಕಿಂತ ಹೆಚ್ಚು ಸಭೆ, ಸಮಾರಂಭಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಆನ್ಲೈನ್ ಮುಖಾಂತರವೂ ತರಗತಿಗಳನ್ನು ಮಾಡಿದ್ದಾರೆ.ಮುಟ್ಟಿನ ಕುರಿತು ಶಾಲಾ-ಕಾಲೇಜು ಮಕ್ಕಳಿಗೆ ಜಾಗೃತಿ "ನಾನು ರಾಜ್ಯದ ಎಲ್ಲಾ ಭಾಗಗಳಲ್ಲಿ ಓಡಾಡಿದಾಗ ಅಸ್ವಚ್ಛತೆಯನ್ನು ನೋಡಿ ಬೇಸರಗೊಂಡೆ. ಕೆಲವರಿಗೆ ಇದರಿಂದ ಸೋಂಕು ಹೆಚ್ಚಾಗಿತ್ತು, ಕೆಲವರು ಕ್ಯಾನ್ಸರ್ಗೂ ತುತ್ತಾಗಿದ್ದರು. ಅಂತಹವರಿಗೆ ನೇರವಾಗಿ ಸಮಾಧಾನಕರವಾಗಿ ತಿಳಿ ಹೇಳುವವರು ಬೇಕು. ಆಶಾ ಕಾರ್ಯಕರ್ತೆಯರು ಈ ಕೆಲಸ ಮಾಡಬೇಕು. ಅವರಿಗೂ ಕೆಲವರಲ್ಲಿ ಮನವಿ ಮಾಡಿ ಕೆಲಸ ಮಾಡುವಂತೆ ತಿಳಿ ಹೇಳಿದ್ದೇನೆ. ‘ಆದರೂ ನಮ್ಮ ದೇಶದಲ್ಲಿ ಮುಟ್ಟನ್ನು ಇನ್ನೂ ಗಲೀಜು, ಅಸಹ್ಯ, ಅದೊಂದು ಖಾಯಿಲೆ ಎಂದೇ ನೋಡಲಾಗುತ್ತಿದೆ, ತಿಳಿವಳಿಕೆ ಕಡಿಮೆ ಇದೆ. ಇದಕ್ಕಾಗಿ ನಮ್ಮ ಸಕ್ರಿಯಾ ಸಂಸ್ಥೆ ಶ್ರಮಿಸುತ್ತಿದೆ.'' ಎಂದು ಅನಿತಾ ಹೇಳಿದರು. 2014ರ ಅಂಕಿ- ಅಂಶದ ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ 23ಮಿಲಿಯನ್ ಹೆಣ್ಣುಮಕ್ಕಳು ಮುಟ್ಟಿನ ಕಾರಣದಿಂದಲೇ ಶಾಲೆಯಿಂದ ವಂಚಿತರಾಗುತ್ತಿದ್ದಾರೆ. ಸ್ವಚ್ಛತೆಯ ಅರಿವು ಇಲ್ಲದೇ ಹೆದರಿಕೊಂಡು ಶಾಲೆ ಬಿಡುತ್ತಾರೆ. ನ್ಯಾಪ್ಕಿನ್ಗಳನ್ನು ಕೊಂಡುಕೊಳ್ಳುವ ಶಕ್ತಿ ಇಲ್ಲದೇ ಶಾಲೆ ಬಿಡುತ್ತಾರೆ.
ತಾಯಂದಿರೇ, ಮುಟ್ಟು ಎನ್ನುವುದು ಗಲೀಜು ಎಂಬಂತೆ ಮಕ್ಕಳ ಮನಸ್ಸಿಗೆ ತುಂಬುತ್ತಿದ್ದಾರೆ. "ಕಾರ್ಪೊರೇಟ್, ಪ್ಯಾಷನ್, ಸಿನಿಮಾ ಇಂಡಸ್ಟ್ರಿಯಂತಹ ಕಡೆಯಲ್ಲೂ ಮುಟ್ಟಿನ ಬಗ್ಗೆ ಅಜ್ಞಾನ ಇದೆ. ನಾನು ಅಲ್ಲೂ ಕೆಲಸ ಮಾಡಿದ್ದೇನೆ. ಹಳ್ಳಿ ಹಾಗೂ ಅಶಿಕ್ಷಿತರಲ್ಲಿ ಮಾತ್ರ ಅಲ್ಲ. ಶಿಕ್ಷಿತರಲ್ಲೂ ಕೆಲವರು ಮುಟ್ಟನ್ನು ಅನಿಷ್ಟ ಎಂದೇ ನಂಬಿದ್ದಾರೆ. ಈಗ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮುಟ್ಟಾಗುತ್ತಾರೆ. ಅಂತವರಿಗೆ ಸರಿಯಾದ ತಿಳಿವಳಿಕೆ ಹೇಳುತ್ತಿಲ್ಲ. ಆ ದಿನಗಳಲ್ಲಿ ಶಾಲೆಗೆ ಕಳಿಸದಿರುವುದೇ ಒಳ್ಳೆಯದು ಎಂದು ಬಹಳಷ್ಟು ಜನ ನಂಬಿದ್ದಾರೆ' ಎನ್ನುತ್ತಾರೆ ಅನಿತಾ.