ಬೆಂಗಳೂರು: ಕಳೆದ 9 ವರ್ಷಗಳಿಂದ ತುರ್ತು ಸಂದರ್ಭಗಳಲ್ಲಿ, ಬೆಂಕಿ ಅವಘಡ ಸಂಭವಿಸಿದಾಗ, ಪ್ರವಾಹ ಭೀತಿಯಲ್ಲೂ ನಾಗರಿಕ ರಕ್ಷಣಾ ಸಿಬ್ಬಂದಿಯಾಗಿ ದುಡಿದ ಡಾ. ಆಂಥೋನಿ ಎಸ್.ಎಲ್ ಅವರು 2020ರ ನಾಗರಿಕ ರಕ್ಷಣೆ ವಿಭಾಗದಲ್ಲಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ ನಾಗರಿಕ ರಕ್ಷಣಾ ತಂಡದಿಂದ ಮೂವರು ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಡಾ. ಆಂಥೋನಿ ಎಸ್. ಎಲ್ ಅವರು, ಡಿವಿಷನ್ 43ಕ್ಕೆ, ಡಿವಿಷನಲ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೆಡಲ್ಗೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಅವಘಡ ಸಂಭವಿಸಿದರೂ ತಕ್ಷಣ ಸ್ಪಂದಿಸಿ ಅನಾಹುತ ತಡೆಯಲು ಮೊದಲು ಹೋಗಿ ಸೇವೆ ಸಲ್ಲಿಸುತ್ತೇವೆ. ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ವಿಭಾಗದಡಿ ಸಿವಿಲ್ ಡಿಫೆನ್ಸ್ ವಿಂಗ್ ಬರುತ್ತದೆ. ಕೇಂದ್ರ ಕಚೇರಿಯಿಂದ ಸಂದೇಶ ಬಂದ ಕೂಡಲೇ, ತುರ್ತು ಪರಿಸ್ಥಿತಿಯ ಸ್ಥಳಕ್ಕೆ ಧಾವಿಸುತ್ತೇವೆ. ಇದಕ್ಕೆ ಅಗತ್ಯ ತರಬೇತಿಗಳನ್ನು ಪಡೆದುಕೊಂಡಿರುತ್ತೇವೆ. ಜನರು, ಆಸ್ತಿ-ಪಾಸ್ತಿಯ ರಕ್ಷಣೆಗೆ ಮುಂದಾಗುತ್ತೇವೆ. ಯಾವುದೇ ವೇತನ ಇಲ್ಲದೆ ಸ್ವಯಂಸೇವಕರಾಗಿ ದುಡಿಯುತ್ತೇವೆ. ಮಾಡಿದ ಕೆಲಸಗಳ ಬಗ್ಗೆ ರಿಪೋರ್ಟ್ ಇದ್ದು, ಇದರ ಪ್ರಕಾರವಾಗಿ ಸಿಎಂ ಮೆಡಲ್ ಅಥವಾ ರಾಷ್ಟ್ರಪತಿ ಮೆಡಲ್ಗೆ ಆಯ್ಕೆ ಮಾಡುತ್ತಾರೆ. ಹೀಗಾಗಿ ಈ ಬಾರಿ ಕರ್ನಾಟಕದಿಂದ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿ ಪದಕ ಪಡೆದುಕೊಂಡಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. 2013 ರಲ್ಲಿ ಮುಖ್ಯಮಂತ್ರಿ ಪದಕ ದೊರೆತಿತ್ತು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಮೂವರಿಗೆ ರಾಷ್ಟ್ರಪತಿ ಪದಕ ದೊರೆತಿದ್ದು, ಡಾ. ಚೇತನ್, ಹಾಗೂ ಹೆಚ್. ಗೌತಮ್ಗೆ ಗ್ಯಾಲಂಟರಿ ಅವಾರ್ಡ್, ಮೆರಿಟೋರಿಯಸ್ ಸರ್ವಿಸ್ ವಿಭಾಗದಲ್ಲಿ ನನಗೆ ದೊರೆತಿದೆ ಎಂದರು. ಡಿಜಿಪಿ ಎ.ಎಂ. ಪ್ರಸಾದ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೆಡಲ್ಗಳಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ಸಿಗುತ್ತದೆ ಎಂದು ಆಂಥೋನಿ ತಿಳಿಸಿದ್ದಾರೆ.