ಬೆಂಗಳೂರು: ಸಂವಿಧಾನ ಬದಲಾಯಿಸುವುದು ಎಂದರೆ ಹೇಗೆ? ಕುಟುಂಬ ರಾಜಕಾರಣದ ಪೋಷಣೆಗಾಗಿ ಅಧಿಕಾರವನ್ನು ತಮ್ಮ ಕಪಿಮುಷ್ಠಿಯಲ್ಲಿರಿಸಿಕೊಳ್ಳಲು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ ರೀತಿಯೇ? ರಕ್ತಕ್ರಾಂತಿ ಎಂದರೆ ಕಾಂಗ್ರೆಸ್ ಕೃಪಾಪೋಷಿತ ಪುಂಡರು ನಡೆಸಿದ ಸಿಖ್ ನರಮೇಧದಂತೆಯೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ಸಿಗರಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ ಗೌರವವೂ ಇಲ್ಲ. ಅಂಬೇಡ್ಕರ್ ವಿರುದ್ಧ ಅವರ ಸಹಾಯಕನನ್ನೇ ಚುನಾವಣೆಗೆ ನಿಲ್ಲಿಸಿ ಸಂವಿಧಾನ ಶಿಲ್ಪಿಯನ್ನು ಸೋಲಿಸಿದ್ದು ಯಾವ ಸೀಮೆಯ ಪ್ರೀತಿ? ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಿದ್ದು, ಸಂವಿಧಾನಕ್ಕೆ ನೀಡುವ ಗೌರವವೇ? ಎಂದು ಟ್ವಿಟ್ ಮೂಲಕ ಕಿಡಿಕಾರಿದೆ.
ಸಿದ್ದರಾಮಯ್ಯನವರೇ, ದಲಿತರನ್ನು ಅಧಿಕಾರ ದಾಹದ ಮೆಟ್ಟಿಲಾಗಿಸಿಕೊಂಡ ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಅಂಬೇಡ್ಕರ್, ಸಂವಿಧಾನ ಹಾಗೂ ದಲಿತರಿಗೆ ಕಾಂಗ್ರೆಸ್ ಮಾಡಿದ ದ್ರೋಹದ ಇತಿಹಾಸ ತಿಳಿದುಕೊಳ್ಳಿ. ಬಳಿಕ ನಿಮ್ಮ ಭಾಷಣವನ್ನು ಮುಂದುವರೆಸಿ ಎಂದು ಬಿಜೆಪಿ ಟಾಂಗ್ ನೀಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಅಂಬೇಡ್ಕರ್ ಹೆಸರು ನೆನಪಾಗುತ್ತದೆ. ಸಿದ್ದರಾಮಯ್ಯನವರ ಸಂವಿಧಾನ ಹಾಗೂ ದಲಿತ ಪರ ಕಾಳಜಿಯ ಬಗ್ಗೆ ಪರಮೇಶ್ವರ್ ಹಾಗೂ ಶ್ರೀನಿವಾಸ್ ಪ್ರಸಾದ್ ಅವರ ಬಳಿ ಸ್ವಲ್ಪ ವಿಚಾರಿಸುವುದು ಸೂಕ್ತವಲ್ಲವೇ? ಎಂದು ಕಾಲೆಳೆದಿದೆ.
ನೀವು ಮಾತ್ರ ಯಾರಿಗೆ ಏನು ಬೇಕಾದರೂ ಹೇಳಿ ನಿಂದಿಸಬಹುದೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರನ್ನು ನೀವು ಭಯೋತ್ಪಾದಕ ಎಂದು ಆರೋಪಿಸಿದ್ದೀರಿ. ಎಲ್ಲರೂ ಇದೇ ದಾಟಿಯಲ್ಲಿ ಉತ್ತರ ನೀಡಿದರೆ ನೀವು ಸಹಿಸುತ್ತೀರಾ? ಸತ್ಯ ಕಟುವಾಗಿಯೇ ಇರುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು ಘಟಿಸಿದ್ದು ಸುಳ್ಳೇ? ದೇಶಾದ್ಯಂತ ಉಗ್ರ ಕೃತ್ಯ ನಡೆದಾಗ ಕಾಂಗ್ರೆಸ್ ಅದಕ್ಕೆ ಪ್ರತಿರೋಧ ನೀಡದೇ ಸೋತದ್ದು ಸುಳ್ಳೇ? ಮುಂಬೈ ದಾಳಿ ಆದಾಗ ಪಾರ್ಟಿ ಮಾಡುತ್ತಿದ್ದವರು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದೆ.
ಸಾಕ್ಷ್ಯವಿಲ್ಲದೇ ಆರೋಪ ಮಾಡುವುದೇ ಸಿದ್ದರಾಮಯ್ಯ ಇದುವರೆಗೆ ಮಾಡಿಕೊಂಡು ಬಂದಿರುವ ರಾಜಕೀಯ. ಜನರ ಲಕ್ಷ್ಯ ಬೇರೆಡೆ ಸೆಳೆಯುವ ತಂತ್ರಗಾರಿಕೆಯಿದು. ಆದರೆ, ಎಷ್ಟೋ ಸಂದರ್ಭದಲ್ಲಿ ಅವರು ಮಾಡಿದ ಆರೋಪಗಳಿಗೆ ಸಾಕ್ಷಿ ಅವರ ಮನೆಯ ಎದುರು ಬಂದು ನಿಂತಿರುತ್ತವೆ. ದೇಶದ ಆಂತರಿಕ ಭದ್ರತೆ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಸದಾ ಇಬ್ಬಗೆಯ ನಿಲುವು ಪ್ರದರ್ಶಿಸುತ್ತದೆ. ಭಯೋತ್ಪಾದಕರ ದಾಳಿಯಾದಾಗಲೂ ಶಾಂತಿ ಮಂತ್ರ ಜಪಿಸುವ ನೀವು ನಗರ ನಕ್ಸಲರಿಗೆ ರಾಜ ಸನ್ಮಾನ ಕೊಡುವುದು ಸುಳ್ಳೇ? ಈ ಕಾರಣಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು ಎಂದು #ಬುರುಡೆ ರಾಮಯ್ಯ ಎಂದು ಹ್ಯಾಷ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿದೆ.