ಮೈಸೂರು: ಶಿವರಾತ್ರಿಗೆ ಇನ್ನೆರಡು ದಿನ ಬಾಕಿಯಿದೆ. ಶಿವನ ಆರಾಧಾನೆ ಮಾಡಲು ದೇವಾಲಯಗಳು ಸಜ್ಜಾಗಿವೆ. ಭಕ್ತಾದಿಗಳು ಸೆಳೆಯಲು ಮೈಸೂರಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವು ತೆಂಗಿನ ಕಾಯಿಗಳಿಂದ ಶಿವಲಿಂಗ ನಿರ್ಮಿಸಿದ್ದಾರೆ.
ಪ್ರತಿವರ್ಷ ಶಿವರಾತ್ರಿಗೆ ವಿಭಿನ್ನ ಮಾದರಿಗಳ ಮೂಲಕ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ, ಭಕ್ತರನ್ನು ಈ ತಂಡ ಆಕರ್ಷಿಸುತ್ತದೆ. ಈ ಬಾರಿ ತಿ. ನರಸಿಪುರ ರಸ್ತೆಯಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ತೆಂಗಿನಕಾಯಿಗಳಿಂದ 21 ಅಡಿ ಎತ್ತರದ ಶಿವಲಿಂಗವನ್ನು ನಿರ್ಮಿಸಲಾಗಿದೆ.
ತೆಂಗಿನಕಾಯಿಗಳಿಂದ ಶಿವಲಿಂಗ ನಿರ್ಮಾಣ ಮಾಡಿರುವುದರಿಂದ ವಿಭಿನ್ನ ಕಾನ್ಸೆಪ್ಟ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ತಬ್ಧಚಿತ್ರ ಕಲಾವಿದರಾದ ಕುಮಾರ್ ಗೌರವ್ ಹಾಗೂ ಯೋಗೇಶ್ ತಂಡ 5 ಲಕ್ಷ ರೂ. ವೆಚ್ಚದಲ್ಲಿ 8 ಸಾವಿರ ತೆಂಗಿನಕಾಯಿಗಳನ್ನು ಬಳಸಿಕೊಂಡು ಶಿವಲಿಂಗ ನಿರ್ಮಾಣ ಮಾಡಿದ್ದಾರೆ.
ತೆಂಗಿನಕಾಯಿಗಳಿಂದ ಸುಂದರವಾಗಿ ನಿರ್ಮಾಣವಾಗಿರುವ ಶಿವಲಿಂಗ ನೋಡಲು ಭಕ್ತಾದಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮಾರ್ಚ್ 11 ರಂದು ಶಿವರಾತ್ರಿ ಹಬ್ಬ ಇರುವುದರಿಂದ ತೆಂಗಿನಕಾಯಿಗಳಿಂದ ನಿರ್ಮಾಣವಾಗಿರುವ ಶಿವಲಿಂಗ ದರ್ಶನ ಪಡೆಯಲು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ತೆಂಗಿನಕಾಯಿಗಳಿಂದ ನಿರ್ಮಾಣವಾಗಿರುವ ಶಿವಲಿಂಗ ದರ್ಶನಕ್ಕೆ ಮಾರ್ಚ್ 13 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.