ಶಿವಮೊಗ್ಗ: ರಾಜ್ಯದೆಲ್ಲೆಡೆ ವೈರಲ್ ಫೀವರ್,ಕೊರೊನಾ ಮೂರನೇ ಅಲೆ ತಾಂಡವವಾಡುತ್ತಿದೆ. ಆದರೆ, ಇದರ ನಡುವೆ ಜಿಲ್ಲೆಯಲ್ಲಿ ಅಂಗನವಾಡಿಗಳು ಕೋವಿಡ್ನಿಂದ ಮುಕ್ತವಾಗಿದ್ದು, ಚಿಣ್ಣರಿಂದ ಚಿಲಿಪಿಲಿಗುಟ್ಟುತ್ತಿವೆ.
ಕೋವಿಡ್ನಿಂದಾಗಿ ಅಂಗನವಾಡಿಗಳು ಬಾಗಿಲು ಮುಚ್ಚಿ ವರ್ಷಗಳೇ ಕಳೆದಿತ್ತು. ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರೂ ಹಿಂದೇಟು ಹಾಕುತ್ತಿದ್ದರು.
ದಿನ ಕಳೆದಂತೆ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಅಂಗನವಾಡಿಗಳಲ್ಲಿ ಮಕ್ಕಳು ಸುರಕ್ಷಿತವಾಗಿರುವುದರಿಂದ ಇದೀಗ ಪಾಲಕರೂ ಯಾವುದೇ ಅಳುಕಿಲ್ಲದೆ ಮಕ್ಕಳನ್ನು ಅಂಗನವಾಡಿಗಳಿಗೆ ಬಂದು ಬಿಡುತ್ತಿದ್ದಾರೆ. ಹೀಗಾಗಿ, ಅಂಗನವಾಡಿಗಳು ಹೌಸ್ಫುಲ್ ಆಗಿವೆ.
ಜಿಲ್ಲೆಯಲ್ಲಿ ಒಟ್ಟು 2,439 ಅಂಗನವಾಡಿಗಳಿದ್ದು, 1.26 ಲಕ್ಷ ಮಕ್ಕಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರಸ್ತುತ 1.06 ಲಕ್ಷ ಮಕ್ಕಳು ಪ್ರತಿದಿನ ಅಂಗನವಾಡಿಗೆ ಬರುತ್ತಿದ್ದಾರೆ. ಅಂಗನವಾಡಿ ಆರಂಭವಾದಾಗ ಶೇ.10ರಷ್ಟು ಮಕ್ಕಳ ಪೋಷಕರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದರು.
ಆದರೆ, ಇದೀಗ ಶೇ.100ರಷ್ಟು ಲಸಿಕೆ ಹಾಕಲಾಗಿದೆ. 2419 ಅಂಗನವಾಡಿ ಕಾರ್ಯಕರ್ತೆಯರು, 2,125 ಸಹಾಯಕಿಯರಿಗೆ ಲಸಿಕೆ ನೀಡಲಾಗಿದೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಸೇಶನ್ ಮಾಡಯತ್ತಿರುವುದರಿಂದ ಅಂಗನವಾಡಿಗಳಲ್ಲಿ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣವಾಗಿದೆ.
ಇದನ್ನೂ ಓದಿ: ಇವು 6 ತಿಂಗಳಲ್ಲಿ ಬೊಮ್ಮಾಯಿ ಸರ್ಕಾರದ ಸಾಧನೆ, ಮುಂದಿರುವ ಸವಾಲುಗಳು..
ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ,ಕೊರೊನಾ ಸೋಂಕಿನಿಂದ ಅವುಗಳನ್ನು ಬಂದ್ ಮಾಡುವುದು ಪರಿಹಾರವಲ್ಲ. ಬದಲಿಗೆ ಎಲ್ಲಾ ಜಾಗರೂಕತೆಗಳನ್ನು ವಹಿಸಿ ಕಾರ್ಯನಿರ್ವಹಿಸಿದರೆ ಕೊರೊನಾ ನಿಯಂತ್ರಣಕ್ಕೆ ತರಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಅಂಗನವಾಡಿಗಳು ಸಾಕ್ಷಿಯಾಗಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ