ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಾಬೀತಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಜೈಲುಶಿಕ್ಷೆ ಮುಕ್ತಾಯಗೊಳಿಸಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಶಿಕಲಾ ನಟರಾಜನ್ ಗೆ ಜೈಲಿನಿಂದ ಬಿಡಗಡೆಗೆ ವೇಳೆಯೇ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆ, ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬೆಳಗ್ಗೆ 10.30 ರ ಬಳಿಕ ಶಶಿಕಲಾ ನಟರಾಜನ್ ಡಿಸ್ಚಾರ್ಜ್ ಆಗಲಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿರುವ ಶಶಿಕಲಾ ನಟರಾಜನ್ ಅವರಿಗೆ, ಅದ್ಧೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 10 ಕಡೆಗಳಲ್ಲಿ ಸ್ವಾಗತ ಹಾಗೂ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ನಗರದ ಪೊಲೀಸರು ಇದಕ್ಕೆಲ್ಲ ಅವಕಾಶ ನೀಡಿಲ್ಲವೆಂದು ತಿಳಿದುಬಂದಿದೆ.
ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರವಾಗಿದೆ, ಅವರು ಫಿಟ್ ಆಗಿದ್ದಾರೆ. ಆಕ್ಸಿಜನ್ ಇಲ್ಲದೆ ಉಸಿರಾಡುತ್ತಿದ್ದಾರೆ. ಹತ್ತು ದಿನಗಳ ನಂತರ ಪ್ರೋಟೋಕಾಲ್ ಪ್ರಕಾರ ಯಾವುದೇ ಕೊರೊನಾ ಟೆಸ್ಟ್ ಮಾಡುವ ಆಗತ್ಯವಿಲ್ಲ. ಏಳರಿಂದ ಹತ್ತು ದಿನಗಳವರೆಗೆ ಹೋಂ ಐಸೋಲೇಷನ್ನಲ್ಲಿರಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವೈದ್ಯರು ತಪಾಸಣೆ ನಡೆಸಿದ ನಂತರ, ಶಶಿಕಲಾ ಕುಟುಂಬಸ್ಥರು ಆಸ್ಪತ್ರೆಯಿಂದ ಕರೆದುಕೊಂಡು ಹೋಗಲಿದ್ದಾರೆ. ಇಳವರಸಿಗೆ ಇಂದು ಡಿಸ್ಚಾರ್ಜ್ ಮಾಡಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವಿಕ್ಟೋರಿಯಾ ಅಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿರುವ ಶಶಿಕಲಾ, ಡಿಸ್ಚಾರ್ಜ್ ಆದ ಬಳಿಕ ಕೆಲ ದಿನಗಳ ಕಾಲ ಬೆಂಗಳೂರಿನಲ್ಲೇ ಇರಲಿದ್ದಾರೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ - ಆನೇಕಲ್ ಸಮೀಪ ಫಾರ್ಮ್ ಹೌಸ್ ನಲ್ಲಿ ಉಳಿದುಕೊಳ್ಳುತ್ತಾರೆ ಎನ್ನಲಾಗ್ತಿದೆ. ಈ ಫಾರ್ಮ್ ಹೌಸ್ ಶಶಿಕಲಾ ನಟರಾಜನ್ ಅವರ ಆಪ್ತರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ಫಾರ್ಮ್ ಹೌಸ್ ನಲ್ಲಿ ಫೆಬ್ರವರಿ 3 ರವರೆಗೆ ವಿಶ್ರಾಂತಿ ಪಡೆಯಲಿದ್ದಾರೆ. ಫೆಬ್ರವರಿ 3 ಇಲ್ಲವೇ ಫೆಬ್ರವರಿ 8ಕ್ಕೆ ಚೆನ್ನೈಗೆ ತೆರಳುವ ಸಾಧ್ಯತೆ ಇದೆ. ಮೆರವಣಿಗೆ ಹಾಗೂ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಓದಿ : ಐದೂವರೆ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಮಹಿಳೆ.. ಆಸ್ಪತ್ರೆಯಿಂದ 6 ಕೋಟಿ ರೂಪಾಯಿ ಬಿಲ್ ಆರೋಪ