ಬೆಂಗಳೂರು: ಯಾರೇ ಆದರೂ ಪಕ್ಷದ ಶಿಸ್ತನ್ನು ಉಲ್ಲಂಘಿಸಬಾರದು. ಪಕ್ಷಕ್ಕೆ ಮುಜುಗರವಾಗುವ ಹಾಗೆ ಹೇಳಿಕೆಗಳನ್ನು ಕೊಡಬಾರದು. ಹಾಗೆ ಮಾಡಿದಲ್ಲಿ ಉಚ್ಛಾಟನೆ ಅನಿವಾರ್ಯ ಎಂದು ಮಾಜಿ ಸಚಿವ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡಗೆ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಸೂರಿನಿಂದಲೇ ಉಚ್ಛಾಟನೆ ಆರಂಭ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೂ ಇದನ್ನೇ ಹೇಳಿರೋದು. ಜೆಡಿಎಸ್ ಕಾಲಕಾಲಕ್ಕೆ ಬದಲಾಗುತ್ತೆ ಎಂಬುದೆಲ್ಲಾ ಸುಳ್ಳು. ಪಕ್ಷದಲ್ಲೇ ಇದ್ದುಕೊಂಡು ಇಂತಹ ಹೇಳಿಕೆ ಕೊಡೋದು ಸರಿಯಲ್ಲ. ಯಾರ್ಯಾರು ಯಾವಾಗ ಬದಲಾಗ್ತಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ಜಿ.ಟಿ.ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾಗುತ್ತದೆ: ಜಿ.ಟಿ. ದೇವೇಗೌಡ
ಶಾಸಕರಿಗೆ ಅನುದಾನ ನೀಡುತ್ತಿಲ್ಲವೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಮಗೆ ಕೊಡಬೇಕಾದ 2 ಕೋಟಿ ರೂ. ಶಾಸಕರ ನಿಧಿಯನ್ನೇ ಕೊಟ್ಟಿಲ್ಲ. ಇನ್ನು ಕ್ಷೇತ್ರದ ಅನುದಾನ ಎಲ್ಲಿಂದ ಬರುತ್ತದೆ. ನನ್ನ ಕ್ಷೇತ್ರದಲ್ಲೂ ಅರ್ಧಂಬರ್ಧ ರಸ್ತೆ ಮಾಡಿದ್ದಾರೆ. ಕಂಟ್ರಾಕ್ಟರ್ ಕೇಳಿದ್ರೆ ಬಿಲ್ ಬಂದಿಲ್ಲ ಅಂತಾರೆ. ಶಾಸಕರಿಗೆ ಅನುದಾನ ಸರ್ಕಾರದಿಂದ ಸಿಗುತ್ತಿಲ್ಲ. ಇದನ್ನೇ ಅವರ ಪಕ್ಷದವರೂ ಹೇಳಿದ್ದಾರೆ ಎಂದರು.