ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. ಜ್ಞಾನಾಕ್ಷಿ ವಿದ್ಯಾನಿಕೇತನ ಕೇಂದ್ರದಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ.
ಬೆಳಗ್ಗೆ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು. ನಂತರ ಅಂಚೆ ಮತಗಳ ಪೆಟ್ಟಿಗೆಯನ್ನು ಎಣಿಕೆಗೆ ಕಳುಹಿಸಲಾಯಿತು. ಅಂಚೆ ಮತಗಳ ಎಣಿಕೆಯಿಂದ ಹಿಡಿದು ಈವರೆಗೆ 8 ಸುತ್ತುಗಳ ಮತ ಎಣಿಕೆಯಲ್ಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅತಿ ಕಡಿಮೆ ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಒಟ್ಟು ಏಳು ಕೊಠಡಿಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, 28 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 25 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. 2.09 ಲಕ್ಷ ಮತಗಳು, 412 ಅಂಚೆ ಮತಗಳು ಚಲಾವಣೆಯಾಗಿವೆ.