ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಮುಖಂಡರನ್ನು ಬಿಜೆಪಿ ಕರೆತರುತ್ತಿರುವ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂಲ ಮತ್ತು ವಲಸಿಗರ ನಡುವೆ ಸಮನ್ವಯ ಸಾಧಿಸಲು ಸಭೆಗಳನ್ನು ನಡೆಸುತ್ತಿದ್ದಾರೆ.
ಆರ್.ಆರ್.ನಗರದ ಐವರು ಕಾಂಗ್ರೆಸ್ ಕಾರ್ಪೊರೇಟರ್ಗಳು, ಪರಾಜಿತ ಅಭ್ಯರ್ಥಿಗಳು, ಮಾಜಿ ಕಾರ್ಪೊರೇಟರ್ಗಳನ್ನು ಬಿಜೆಪಿಗೆ ಕರೆತಂದ ನಂತರ ಆಂತರಿಕ ಕಲಹದ ಸಾಧ್ಯತೆ ಎದುರಾದ ಹಿನ್ನೆಲೆಯಲ್ಲಿ ಮೂಲ ಮತ್ತು ವಲಸಿಗ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂಬರಲಿರುವ ಬಿಬಿಎಂಪಿ ಚುನಾವಣಾ ಟಿಕೆಟ್ ವಿಷಯದ ಕುರಿತು ಯಾರೂ ಆತಂಕಪಡುವುದು ಬೇಡ, ಅರ್ಹರಿಗೆ ಟಿಕೆಟ್ ಸಿಗಲಿದೆ ಎನ್ನುವ ಭರವಸೆ ನೀಡಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಮನವೊಲಿಸುತ್ತಿದ್ದಾರೆ.
ಇದರ ಜೊತೆ ಆರ್.ಆರ್. ನಗರದ ಬಿಬಿಎಂಪಿ ಮಾಜಿ ಸದಸ್ಯೆ ನಳಿನಿ ಮಂಜುನಾಥ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಚುನಾವಣೆ ಕುರಿತು ಅಭ್ಯರ್ಥಿ ಮುನಿರತ್ನ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಳಿನಿ ಅವರ ಪತಿ ಮಾಜಿ ನಗರಸಭೆ ಸದಸ್ಯ ಮಂಜುನಾಥ್, ಬಿಜೆಪಿ ಮುಖಂಡರಾದ ರಾಮಚಂದ್ರಪ್ಪ, ವಿ.ಸಿ.ಚಂದ್ರು ಅವರು ಉಪಸ್ಥಿತರಿದ್ದರು.