ಬೆಂಗಳೂರು: ರಾಜ್ಯ ಸರ್ಕಾರದ ವೆಚ್ಚದಲ್ಲಿ ಮಡಿಕೇರಿ ಕೋಟೆ ಆವರಣದಲ್ಲಿರುವ ಪುರಾತನ ಅರಮನೆ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಅದರ ವೆಚ್ಚದ ಮೇಲೆ ಸೇವಾ ತೆರಿಗೆ ವಿಧಿಸಲು ಮುಂದಾಗಿರುವ ಭಾರತೀಯ ಸರ್ವೇಕ್ಷಣಾ ಮತ್ತು ಪುರತಾತ್ವ ಇಲಾಖೆ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕಾಮಗಾರಿಯ ವೆಚ್ಚದ ಮೇಲೆ ಶೇ.18ರಷ್ಟು ಸೇವಾ ತೆರಿಗೆ ವಿಧಿಸಲು ಮುಂದಾಗಿರುವ ಪುರಾತತ್ವ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಯಾವ ಕಾನೂನಿನಡಿ ಸೇವಾ ತೆರಿಗೆ ವಿಧಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ಇಲ್ಲದಿದ್ದರೆ ಉದ್ದೇಶಿತ ತೆರಿಗೆ ಹಣವನ್ನು ನಿಮ್ಮಿಂದ ವಸೂಲಿ ಮಾಡಲು ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಐತಿಹಾಸಿಕ ಮಡಿಕೇರಿ ಅರಮನೆ ನವೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಜೆ ಎಸ್ ವಿರೂಪಾಕ್ಷಯ್ಯ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಎನ್ ರವೀಂದ್ರನಾಥ್ ಕಾಮತ್ ವಾದಿಸಿ, ಪುರಾತತ್ವ ಇಲಾಖೆ ಕಳಪೆ ಕಾಮಗಾರಿ ನಡೆಸುತ್ತಿದ್ದು, ಗುಣಮಟ್ಟದ ಮರದ ಬದಲಿಗೆ ನೀಲಗಿರಿ ಮರದ ತುಂಡುಗಳನ್ನು ಬಳಸುತ್ತಿದೆ.
ಆದ್ದರಿಂದ ಕಾಮಗಾರಿ ಹೊಣೆಯನ್ನು ಪುರಾತತ್ವ ಇಲಾಖೆಯಿಂದ ಕೊಡಗು ಜಿಲ್ಲಾಧಿಕಾರಿಗೆ ವಹಿಸಬೇಕು. ಜತೆಗೆ, ನವೀಕರಣ ಕಾಮಗಾರಿಗಾಗಿ ಸರ್ಕಾರ ಮೀಸಲಿಟ್ಟಿರುವ ಒಟ್ಟು 8.20 ಕೋಟಿ ರೂ.ಗೆ ಶೇ.18ರಷ್ಟು ಹಣವನ್ನು ಸೇವಾ ತೆರಿಗೆಯಾಗಿ ಪುರಾತತ್ವ ಇಲಾಖೆ ಪಡೆಯುತ್ತಿದ್ದು, ಅದರ ಮೊತ್ತವೇ ಅಂದಾಜು 2 ಕೋಟಿ ಆಗಬಹುದು ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸೇವಾ ತೆರಿಗೆ ವಿಧಿಸಲು ಪುರಾತತ್ವ ಇಲಾಖೆಗೆ ಅನುಮತಿ ಕೊಟ್ಟವರು ಯಾರು?, ಅದಕ್ಕೆ ಯಾವ ಕಾನೂನಿನಲ್ಲಿ ಅವಕಾಶವಿದೆ? ನವೀಕರಣ ಕಾಮಗಾರಿಗೆ ಹಣ ನೀಡಿರುವುದೇ ರಾಜ್ಯ ಸರ್ಕಾರ.
ಸರ್ಕಾರದ ಹಣಕ್ಕೆ ಸೇವಾ ತೆರಿಗೆ ಶುಲ್ಕ ವಿಧಿಸುವುದು ಯಾವ ಲೆಕ್ಕಾಚಾರ? ಎಂದು ಪ್ರಶ್ನಿಸಿತು. ಪುರಾತತ್ವ ಇಲಾಖೆ ಪರ ವಕೀಲರು ಉತ್ತರಿಸಿ, ಇಲಾಖೆಯ ಕೈಪಿಡಿಯಲ್ಲಿ ನವೀಕರಣ ಕಾಮಗಾರಿಗೆ ಸೇವಾ ತೆರಿಗೆ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಪೀಠ, ಕೈಪಿಡಿ ಕಾನೂನಲ್ಲ, ಪುರಾತನ ಸ್ಮಾರಕವಾದ ಕೊಡಗು ಅರಮನೆಯ ಸಂರಕ್ಷಣೆ ಪುರಾತತ್ವ ಇಲಾಖೆ ಕರ್ತವ್ಯ.
ಅದನ್ನು ನಿರ್ವಹಿಸದೇ ಸೇವಾ ತೆರಿಗೆ ವಿಧಿಸುವುದು ತಪ್ಪು. ಆದ್ದರಿಂದ, ಮುಂದಿನ ವಿಚಾರಣೆ ವೇಳೆ ಯಾವ ಕಾನೂನಿನಡಿ ಸೇವಾ ತೆರಿಗೆ ವಿಧಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಯಿಂದ ಉದ್ದೇಶಿತ ಸೇವಾ ತೆರಿಗೆ ಹಣವನ್ನು ವಸೂಲಿ ಮಾಡಲು ಆದೇಶಿಸಬೇಕಾಗುತ್ತದೆ. ತೆರಿಗೆ ವಿಧಿಸುವ ಬಗ್ಗೆಯೂ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿ ಜುಲೈ 27ಕ್ಕೆ ವಿಚಾರಣೆ ಮುಂದೂಡಿತು.