ಬೆಂಗಳೂರು: ರಾಜ್ಯ ವಿಧಾನಸಭೆಯ 15ನೇ ಅಧಿವೇಶನದ ಇಂದಿನಿಂದ ಪ್ರಾರಂಭಗೊಂಡಿದ್ದು, ಇಂದಿನ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರತ್ನಗಂಬಳಿ ಸ್ವಾಗತ ನೀಡಲಾಯಿತು. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೂಲಕ ವಿಧಾಸಭೆ ಸಭಾಂಗಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಾಂಪ್ರದಾಯಿಕ ಪೊಲೀಸ್ ಬ್ಯಾಂಡ್ನ ಸುಶ್ರಾವ್ಯ ವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು.
ವಿಧಾನಸೌಧ ಆವರಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಉಭಯ ಸದನಗಳ ಕಾರ್ಯದರ್ಶಿ ಅವರು ಸಂಪ್ರದಾಯದಂತೆ ರಾಜ್ಯಪಾಲರನ್ನು ವಿಧಾನಸಭೆ ಸಭಾಂಗಣಕ್ಕೆ ಬರಮಾಡಿಕೊಂಡರು.
ಮೊದಲು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು 34 ಪುಟಗಳ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಿದರು. ಒಂದು ಗಂಟೆಗಳ ಅವಧಿಯಲ್ಲಿ ಭಾಷಣದ ಪುಸ್ತಕವನ್ನು ರಾಜ್ಯಪಾಲರು ಓದಿ ಮುಗಿಸಿದರು. ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಅವರನ್ನು ಸ್ವಾಗತಿಸಿದ ರೀತಿಯಲ್ಲೇ ಕೆಂಪು ಹಾಸಿನ ಮೂಲಕ ಬೀಳ್ಕೊಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೆರಳುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರ ಕೈ ಕುಲುಕಿ ನಮಸ್ಕರಿಸಿದ್ದು ವಿಶೇಷವಾಗಿತ್ತು.
ನಾಯಕರ ಗೈರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಮೂರು ಪಕ್ಷಗಳ ಹಲವು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದರು.
ಶಾಸಕರೆಲ್ಲರೂ ಅಧಿವೇಶನಕ್ಕೆ ಹಾಜರಿರುವಂತೆ ಮನವಿ ಮಾಡಿದ್ದ ಸಭಾಧ್ಯಕ್ಷ: ಇಂದಿನಿಂದ ಪ್ರಾರಂಭಗೊಂಡು 11 ದಿನಗಳ ಕಾಲ ನಡೆಯುವ ವಿಧಾನಸಭೆ ಅಧಿವೇಶನದ ಹಿನ್ನೆಲೆ ನಿನ್ನೆ ಸುದ್ದಿಗೋಷ್ಠಿ ನಡೆದಿದ್ದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲಾ ಶಾಸಕರು ತಪ್ಪದೆ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದರು. ಕೆಲವು ಶಾಸಕರು ಅಧಿವೇಶನ ನಡೆಯುವ ದಿನಗಳಲ್ಲೇ ಬೇರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿ ಪಡಿಸಿರುವುದನ್ನು ಗಮನಿಸಿದ ಸಭಾಧ್ಯಕ್ಷರು, ಎಲ್ಲಾ ಶಾಸಕರಿಗೆ ಇದು ಕೊನೆಯ ಅಧಿವೇಶನವಾಗಿದ್ದು, ಪ್ರಜಾಪ್ರಭುತ್ವದ ದೇಗುಲವಾಗಿರುವ ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದ್ದರು.
ಇದನ್ನೂ ಓದಿ: ನಾಳೆಯಿಂದ ಅಧಿವೇಶನ: ಸದನಕ್ಕೆ ಹಾಜರಾಗಲು ಶಾಸಕರಿಗೆ ಸಭಾಧ್ಯಕ್ಷ ಕಾಗೇರಿ ಮನವಿ