ಬೆಂಗಳೂರು: ಐಆರ್ಬಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ನೇಮಕಾತಿಯಲ್ಲಿ 28 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ಜೊತೆ ಸಮಾಲೋಚಿಸಿ ಈ ಬಗ್ಗೆ ಮರುಪರಿಶೀಲನೆ ಮಾಡುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಹಾಗೂ ಇತರೆ ಸದಸ್ಯರ ನಿಯಮ 330ರ ಅಡಿ ನಡೆಸಿದ ಚರ್ಚೆಗೆ ಉತ್ತರ ನೀಡಿದ ಅವರು, 2012ನೇ ಸಾಲಿನಲ್ಲಿ ಕೆಎಸ್ಆರ್ಪಿ, ಐಆರ್ಬಿ ಹಾಗೂ ಕೆಎಸ್ಐಎಸ್ಎಫ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ನೇಮಕಾತಿ ಕಚೇರಿಯಿಂದ ಏಕಕಾಲದಲ್ಲಿ ಹೊರಡಿಸಲಾಗಿದೆ.
ಈ 3 ಘಟಕಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನೂ ಸಹ ಏಕಕಾಲದಲ್ಲಿ ಪ್ರಕಟಣೆಗೊಳಿಸಲಾಗಿದೆ. ಮೂರು ಘಟಕಗಳಿಗೆ ಏಕಕಾಲದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಹೆಚ್ಚುವರಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಗೂ ಸಹ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ವಯ ಹಾಗೂ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಸದರಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರುಗಳು ಅರ್ಹತೆಯನುಸಾರ ಸ್ಥಾನವನ್ನು ಪಡೆದಿರುವುದಿಲ್ಲ. ಆದಾಗ್ಯೂ ಸಹ ಅರ್ಜಿದಾರರು ಕೇವಲ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾದ ಕಾರಣವನ್ನು ಪ್ರತಿಪಾದಿಸಿಕೊಂಡು ನೇಮಕಾತಿ ಆದೇಶ ನೀಡುವಂತೆ ಕೋರುತ್ತಿರುತ್ತಾರೆ ಎಂದು ವಿವರಿಸಿದರು.
ಈ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯಲ್ಲಿ ನೇಮಕಾತಿ ಆದೇಶ ಹೊರಡಿಸಿದ ನಂತರ ಕರ್ತವ್ಯಕ್ಕೆ ಹಾಜರಾಗದೇ ಬಾಕಿ ಉಳಿದ ಸ್ಥಾನಗಳಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದಾರೆ. ಈ ಸಂಬಂಧ, ಕರ್ನಾಟಕ ಆಡಳಿತ ಮಂಡಳಿಯೂ ಸಹ ಅರ್ಜಿದಾರರ ಮನವಿಯನ್ನು ಪರಿಶೀಲಿಸಿ ಅರ್ಜಿಯಲ್ಲಿ ಕೋರಲಾದ ಅಂಶಗಳನ್ನು ನೇಮಕಾತಿ ನಿಯಮಾನುಸಾರ ಪರಿಗಣಿಸಲು ಅವಕಾಶವಿಲ್ಲವೆಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ (ಎಸ್ ಕೆಎಟಿ)ಅನ್ನೂ ಸಹ ಸಲ್ಲಿಸಿದ್ದು, ಅರ್ಜಿಯನ್ನೂ ಸಹ ನ್ಯಾಯಾಲಯವು ಹಿಂದಿನ ಆದೇಶವನ್ನೇ ಎತ್ತಿ ಹಿಡಿದಿದೆ. ಕಳೆದ ಕೆಲ ವರ್ಷಗಳಿಂದ ಇವರು ಹೋರಾಡುತ್ತಿದ್ದು, ಇವರ ಪರ ನ್ಯಾಯ ಇದೆ ಎಂದು ಹೆಚ್ಚಿನ ಸದಸ್ಯರು ಹೇಳಿದ್ದರಿಂದ ಇನ್ನೊಮ್ಮೆ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.
ಚರ್ಚೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಇವರು 10 ವರ್ಷಗಳಿಂದ ನೇಮಕಾತಿಗಾಗಿ ಕಾಯ್ತಿದ್ದಾರೆ. ಎಲ್ಲಾ ದಾಖಲೆ ಸರಿಯಿದ್ದರು ಏಕೆ ನೇಮಕಾತಿ ಆದೇಶ ಕೊಟ್ಟಿಲ್ಲ. ಕೂಡಲೇ 28 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ. ಇವರಿಗಿಂತ ಕಡಿಮೆ ಅಂಕ ಪಡೆದವರಿಗೆ ಉದ್ಯೋಗ ಸಿಕ್ಕಿದೆ. ಇವರಿಗೆ ಆದ ಅನ್ಯಾಯವನ್ನು ತನಿಖೆ ನಡೆಸಿ ಸರಿಪಡಿಸಿ. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಾಡಿದ ತಪ್ಪಿಗೆ ಅಮಾಯಕ, ಬಡ ಅಭ್ಯರ್ಥಿಗಳು ಬಲಿಪಶುವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರವಿಕುಮಾರ್ ಮಾತಿಗೆ ಧ್ವನಿಗೂಡಿಸಿದ ಎಸ್.ಆರ್.ಪಾಟೀಲ್, ಆಯನೂರು ಮಂಜುನಾಥ್, ಮರಿತಿಬ್ಬೇಗೌಡ, ತೇಜಸ್ವಿನಿ ಗೌಡ ಮತ್ತಿತರ ಸದಸ್ಯರು ಕೂಡಲೇ ಗೃಹ ಸಚಿವರು ಇದಕ್ಕೊಂದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ನಾನು ಗೃಹ ಸಚಿವ ಆದಾಗ ತುಂಬಾ ಖುಷಿ ಪಟ್ಡಿದ್ದೆ. ಆದ್ರೆ ಇಷ್ಟು ಪರೀಕ್ಷೆ ಬರುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಈ 28 ಅಭ್ಯರ್ಥಿಗಳು ಕೆಎಟಿಗೆ ಹೋಗಿದ್ರು. ಅಲ್ಲಿ ರಿಜೆಕ್ಟ್ ಆಗಿದೆ. ಬಳಿಕ ಹೈಕೋರ್ಟ್ಗೂ ಹೋಗಿದ್ದಾರೆ. ಹೈಕೋರ್ಟ್ನಲ್ಲೂ ರಿಜೆಕ್ಟ್ ಆಗಿದೆ. 2013 ರಲ್ಲಿ ನಡೆದ ಪರೀಕ್ಷೆ ಇದು. ಆದಾದ ಬಳಿಕ ಅನೇಕ ಪರೀಕ್ಷೆ ನಡೆದಿದೆ. ಆದ್ರೆ ಇವ್ರು ಯಾಕೆ ಪರೀಕ್ಷೆ ಬರೆದಿಲ್ಲ ನನಗೆ ಗೊತ್ತಿಲ್ಲ. ನೇಮಕಾತಿ ವೇಳೆ ಡಾಕ್ಯುಮೆಂಟ್ ಸರಿಯಿಲ್ಲದೆ ಹೋದ್ರೆ ಎಂದು ಹೆಚ್ಚು ಅಭ್ಯರ್ಥಿಗಳನ್ನು ಕರೆದಿರುತ್ತೇವೆ. ಆದ್ರೆ ಎಷ್ಟು ಹುದ್ದೆ ಇತ್ತೋ ಅಷ್ಟು ಹುದ್ದೆ ತುಂಬಲಾಗಿದೆ. ಉಳಿದವರಿಗೆ ಕೈ ಬಿಡಲಾಗಿದೆ. ಈ ವಿಚಾರದಲ್ಲಿ ನಾನು ಅಸಹಾಯಕ. ಆದ್ರು ಈ ಬಗ್ಗೆ ಇನ್ನೊಮ್ಮೆ ಮರು ಪರಿಶೀಲನೆ ಮಾಡ್ತೀನಿ ಎಂದು ಭರವಸೆ ಇತ್ತರು.
ಮರಿತಿಬ್ಬೇಗೌಡರು ಮಾತನಾಡಿ, ಅಯ್ಕೆ ಸಮಿತಿ ಸದಸ್ಯರು ಸರಿಯಾಗಿ ನಿಯಮ ಪಾಲನೆ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಬೇಕು. 28 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದರು. ರವಿಕುಮಾರ್ ಒತ್ತಾಯ ಮಾಡಿ, 28 ಅಭ್ಯರ್ಥಿಗಳು ಫುಟ್ಪಾತ್ನಲ್ಲಿ ಬಿದ್ದಿದ್ದಾರೆ. ಈ ಯುವಕರಿಗೆ ಅನ್ಯಾಯ ಆಗಿದೆ. ಸರ್ಕಾರ ಕರುಣೆಯ ಕಣ್ಣು, ಮಾನವೀಯತೆ ಕಣ್ಣಿನಿಂದ ನೋಡಿ ಸಹಾಯ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ನೇಮಕಾತಿಯಲ್ಲಿ 750 ಅಭ್ಯರ್ಥಿಗಳಿಗಿಂತ ಹೆಚ್ಚು ಅಭ್ಯರ್ಥಿ ಕರೆದಿದ್ದರೆ ತನಿಖೆ ಮಾಡ್ತೀನಿ. ಆದ್ರೆ ಎರಡು ಕೋರ್ಟ್ ಆಯ್ಕೆ ರಿಜೆಕ್ಟ್ ಮಾಡಿದೆ. ಹೀಗಾಗಿ ನೇಮಕಾತಿ ಅಸಾಧ್ಯ. ಆದ್ರೂ ಮತ್ತೊಮ್ಮ ಮರು ಪರಿಶೀಲನೆ ಮಾಡ್ತೀನಿ. ಅಯ್ಕೆ ಪ್ರಕ್ರಿಯೆ ಬಗ್ಗೆ ಇನ್ನೊಂದು ತನಿಖೆ ಮಾಡ್ತೀನಿ ಎಂದರು. ಸುದೀರ್ಘ ಚರ್ಚೆಯ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.