ಬೆಂಗಳೂರು: ನಿನ್ನೆ ಸುರಿದ ಮಳೆಯಿಂದಾಗಿ ನಗರದ ಹಲವು ಪ್ರದೇಶದಲ್ಲಿ ಹಾನಿಯಾಗಿದ್ದು, ಹೊಸಕೆರೆಹಳ್ಳಿ ವಾರ್ಡ್ 161ರ ದತ್ತಾತ್ರೇಯ ನಗರ ವ್ಯಾಪ್ತಿಗೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿದ್ದರು.
ಸ್ಥಳ ಪರಿಶೀಲನೆ ಮಾಡಿದ ಸಚಿವ ಆರ್.ಅಶೋಕ್, ಇಂದು 12 ಗಂಟೆಗೆ ಸಿಎಂ ಯಡಿಯೂರಪ್ಪರೊಂದಿಗೆ ಸಭೆ ನಡೆಸಲಿದ್ದು, ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತೆ. ಹಾಗೇ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಇಲ್ಲಿಯವರೆಗೆ ರಾತ್ರಿಯೇ ನೀರು ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಎರಡು ದಿನ ಊಟದ ವ್ಯವಸ್ಥೆ ಮಾಡುತ್ತೇವೆ. ಆರು ತಿಂಗಳ ಹಿಂದೆಯೇ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಬೇಕಿತ್ತು. 15 ವರ್ಷಗಳಿಂದ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ಕಾಮಗಾರಿ ಆಗ್ತಿರೋದ್ರಿಂದ ಸಮಸ್ಯೆ ಆಗ್ತಾ ಇದ್ದು, ಈ ರೀತಿ ಮಳೆಹಾನಿ ಸಮಸ್ಯೆ ಆಗಬಾರದು ಅಂತಲೇ ಕಾಮಗಾರಿ ಶುರು ಮಾಡಲಾಗಿದೆ. ಅದಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆ ಎಂದರು.