ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ನಲ್ಲಿ ಸಿಗುವ ಆದಾಯ ತೆರಿಗೆ ವಿನಾಯಿತಿ ಮೇಲೆ ದೊಡ್ಡ ಸಂಖ್ಯೆಯಲ್ಲಿ ನಾಗರಿಕರ ಗಮನ ಹರಿಯಲಿದೆ.
ವಾರ್ಷಿಕ 5 ಲಕ್ಷದವರೆಗಿನ ಆದಾಯ ಹೊಂದಿರುವ ಮಧ್ಯಮ ವರ್ಗದವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ಹಿಂದಿನ ವಿತ್ತ ಸಚಿವ ಪಿಯೂಷ್ ಗೋಯಲ್ ಕಳೆದ ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಘೋಷಿಸಿದ್ದರು. ಮಧ್ಯಂತರ ಬಜೆಟ್ ಮಂಡನೆಗೆ ಇಂದು ಮುಹೂರ್ತ ನಿಗದಿಯಾಗಿದ್ದು, ನಿರ್ಮಲಾ ಸೀತಾರಾಮನ್ ಇದರಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎನ್ನುವ ವಿಶ್ವಾಸ ಬಹುತೇಕ ಮಂದಿಯಲ್ಲಿದೆ.
ಪ್ರಾವಿಡೆಂಟ್ ಫಂಡ್ಗಳಲ್ಲಿ ಹಾಗೂ ನಿಗದಿತ ಷೇರುಗಳ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಟ್ಟುವ ದೇಶದ ನಾಗರಿಕರ ಒಟ್ಟು ಆದಾಯ 6.5 ಲಕ್ಷ ರೂ. ವರೆಗೆ ಹೊಂದಿದವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಹಿಂದೆ ಹೇಳಲಾಗಿತ್ತು. ಚುನಾವಣೆಗೆ ಮುನ್ನ ಘೋಷಣೆಯಾದ ಜನಪ್ರಿಯ ಬಜೆಟ್ ಈ ಮಧ್ಯಂತರ ಬಜೆಟ್ ಮೂಲಕ ಅಧಿಕೃತ ಆಚರಣೆಗೆ ಬರಲಿ ಎನ್ನುವುದು ಹಲವರ ಆಶಯವಾಗಿದೆ.
ಹೇಗಿದೆ ವ್ಯವಸ್ಥೆ?:
1997-98 ರಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರನ್ನು ಗಮನಿಸಿದಾಗ 9.95 ಕೋಟಿ ರೂ.ನಷ್ಟು ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ. 6.86 ಲಕ್ಷ ಮಂದಿ ಆದಾಯ ತೆರಿಗೆ ಪಾವತಿಸಿದ್ದಾರೆ. 1998-99ರ ಪಾವತಿಯ ಮಾಹಿತಿ ಬರಬೇಕಿದೆ. 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಿದರೆ ಎಷ್ಟು ತೆರಿಗೆ ಕಡಿಮೆ ಆಗಲಿದೆ ಎನ್ನುವುದನ್ನು ಕೇಂದ್ರ ಸರ್ಕಾರ ವಿವರಿಸಬೇಕಿದೆ. 2.5 ಲಕ್ಷ ರೂ.ನಿಂದ 5 ಲಕ್ಷ ರೂ. ಆದಾಯ ಹೊಂದಿದವರಿಗೆ ಸೆಕ್ಷನ್ 87 ಎ ಪ್ರಕಾರ ರಿಯಾಯಿತಿ ಕೊಡಲಾಗಿದೆ. 2.5 ಲಕ್ಷ ರೂ.ನಿಂದ 5 ಲಕ್ಷ ರೂ. ನಡುವಿನ ಆದಾಯ ಹೊಂದಿದವರಿಗೆ ಶೇ.5ರಷ್ಟು ತೆರಿಗೆ ಇರುತ್ತದೆ. ಇದು 12.5 ಸಾವಿರ ರೂ.ವರೆಗೆ ಬರುತ್ತದೆ. ಇದರಿಂದ ಈ ತೆರಿಗೆ ವ್ಯಾಪ್ತಿಗೆ ಬರುವವರು 87 ಎ ರಿಯಾಯಿತಿ ಕ್ಲೇಮ್ ಮಾಡಿ ರಿಯಾಯಿತಿ ಲಾಭ ಪಡೆಯಬಹುದು. 5 ಲಕ್ಷ ರೂ. ಗಿಂತ 1 ರೂ. ಹೆಚ್ಚು ವೇತನ ಇದ್ದರೂ ಅಂತವರಿಗೆ ಈ ರಿಯಾಯಿತಿ ಅವಕಾಶ ಸಿಗುವುದಿಲ್ಲ. ಅದೊಂದು ಹೊರೆಯಾಗಿದ್ದು, ಕೆಲವರು ಇದಕ್ಕೆ ವಿನಾಯಿತಿ ಕೊಡಿ ಎಂದು ಅರ್ಜಿ ಸಲ್ಲಿಸಿ ಕುಳಿತಿದ್ದು, ಇದುವರೆಗೂ ಅದಕ್ಕೆ ಉತ್ತರ ಸಿಕ್ಕಿಲ್ಲ.
ಲೆಕ್ಕ ಪರಿಶೋಧಕರ ಲೆಕ್ಕಾಚಾರ:
ಭಾರತೀಯ ಲೆಕ್ಕಪರಿಶೋಧಕರ ಇಸ್ಟಿಟ್ಯೂಟ್ (ಐಸಿಎಐ) ಬೆಂಗಳೂರು ಶಾಖೆಯ ಅಧ್ಯಕ್ಷ ಶಿವರಾಮ್ ಭಟ್ ಮಾತನಾಡಿ, ಜನ ತುಂಬಾ ಕುತೂಹಲದಿಂದ ಬಜೆಟ್ನತ್ತ ನೋಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಚಾರವಾಗಿ ಗಮನ ಹರಿಸಿದ್ದಾರೆ. ಸಾಮಾನ್ಯ ನಾಗರಿಕ ಮಾತ್ರ ಆದಾಯ ತೆರಿಗೆಯನ್ನೆ ಪ್ರಮುಖವಾಗಿ ಪರಿಗಣಿಸಿದ್ದಾನೆ. ಆದಾಯ ತೆರಿಗೆ ವಿನಾಯಿತಿ ಇದೇ ಮೊತ್ತದಲ್ಲಿ ಆದಲ್ಲಿ 8 ಕೋಟಿ ರೂ.ನಷ್ಟು ರಿಟರ್ನ್ಗಳು ಫೈಲ್ ಆಗುವ ಸಾಧ್ಯತೆ ಇದೆ. ಇದರಲ್ಲಿ ಒಂದು ಕೋಟಿ ರಿಟರ್ನ್ಗಳು ಕಾರ್ಪೋರೇಟ್, ಸೊಸೈಟಿ ಹಾಗೂ ಟ್ರಸ್ಟ್ಗಳ ಮೂಲಕವಾದರೂ, ಉಳಿದಂತೆ 7 ಕೋಟಿ ಮಂದಿ ನಾಗರಿಕರು ಆದಾಯ ತೆರಿಗೆ ಪಾವತಿ ಮಾಡುತ್ತಾರೆ. 5 ಲಕ್ಷ ರೂ.ಗಿಂತ ಒಳಗಿನ ಆದಾಯ ಹೊಂದಿದವರು ಶೇ.40 ರಷ್ಟು ಅಂದುಕೊಂಡರೂ, 3.75 ಕೋಟಿ ರೂ. ಮಂದಿ ಆದಾಯ ತೆರಿಗೆ ಪಾವತಿಸುತ್ತಿದ್ದರು. ಇಂಥವರಿಗೆ ಈ ವಿನಾಯಿತಿ ಸಿಕ್ಕರೆ 12,500 ರೂ.ವರೆಗೆ ಉಳಿತಾಯವಾಗಲಿದೆ. ಈ ಸಾಧ್ಯತೆಯಿಂದ ಕೇಂದ್ರ ಸರ್ಕಾರಕ್ಕೆ 48 ಸಾವಿರ ಕೋಟಿ ರೂ. ಆದಾಯ ಗಳಿಕೆ ಕಡಿಮೆ ಆಗಲಿದೆ. ಆದರೆ 3.75 ಕೋಟಿ ರೂ. ಮಂದಿಗೆ ಅನುಕೂಲವಾಗಲಿದ್ದು, ಇದರಲ್ಲಿ ಹೆಚ್ಚಿನವರು ಯುವಕರಿಗೆ ಇದರ ಲಾಭ ಸಿಗಲಿದೆ. ಕಡಿಮೆ ಆದಾಯ ಉಳ್ಳವರಿಗೆ ಇದು ಲಾಭದಾಯಕವಾದದ್ದು, ಕೊಂಚ ಆರ್ಥಿಕ ನಷ್ಟವಾದರೂ, ಜನಹಿತ ದೃಷ್ಟಿಯಿಂದ ಸರ್ಕಾರ ಇಂತದ್ದೊಂದು ನಿರ್ಧಾರಕ್ಕೆ ಬದ್ಧವಾಗಿರಲಿದೆ ಎನ್ನುವ ವಿಶ್ವಾಸ ಇದೆ ಎಂದರು.
ತೆರಿಗೆ ವಿಧಿಸುವಲ್ಲಿ ಸ್ಲಾಬ್ ವ್ಯವಸ್ಥೆ ಬರಲಿ:
ಲೆಕ್ಕ ಪರಿಶೋಧಕರಾಗಿರುವ ಕಿಶೋರ್ ಶೆಟ್ಟಿ ಮಾತನಾಡಿ, ವೇತನ ಆದಾಯ ಅವಲಂಬಿತರಿಗೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲರಿಗೂ ಆದಾಯ ತೆರಿಗೆ ವಿನಾಯಿತಿ ನೀಡಬೇಕು. 5 ರಿಂದ 10 ಲಕ್ಷ ರೂ.ವರೆಗಿನ ಆದಾಯ ಹೊಂದಿದವರಿಗೆ ಶೇ.5ರಷ್ಟು, 10 ರಿಂದ 15 ಲಕ್ಷ ರೂ. ಆದಾಯ ಇರುವವರಿಗೆ ಶೇ.15ರಷ್ಟು ಹಾಗೂ 15 ರಿಂದ 20 ಲಕ್ಷ ರೂ. ಆದಾಯ ಹೊಂದಿದವರಿಗೆ ಶೇ.20 ರಷ್ಟು ಹಾಗೂ 20 ಲಕ್ಷ ಕ್ಕಿಂತ ಹೆಚ್ಚು ವೇತನ ಆದಾಯ ಇರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸಿದರೆ ಎಲ್ಲರಿಗೂ ಅನುಕೂಲ ಆಗಲಿದೆ. ಸಂತೋಷವಾಗಿ ಪಾವತಿಸುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಕೆಳ ಹಾಗೂ ಮಧ್ಯಮ ವರ್ಗದವರಿಗೆ ಇದು ಅವಶ್ಯವಿರುವ ಹಾಗೂ ಅಗತ್ಯ ಬಳಕೆಗೆ ಇದು ಲಾಭವಾಗಿ ಸಿಗಲಿದೆ. ನಾಳಿನ ಬಜೆಟ್ನಲ್ಲಿ ಇದಕ್ಕೆ ಪೂರಕವಾದ ಮಾಹಿತಿ ಸಿಗಲಿದೆ ಎನ್ನುವುದು ನನ್ನ ವಿಶ್ವಾಸ ಎಂದಿದ್ದಾರೆ.