ಬೆಂಗಳೂರು: ಜೂನ್ 1 ರಂದು ರಾಜ್ಯದಲ್ಲಿ ಪಬ್, ಬಾರ್ಗಳು ಓಪನ್ ಆಗಲಿವೆ. ಆದ್ರೆ ಕೆಲಸಗಾರರ ಕೊರತೆ ದೊಡ್ಡ ಮಟ್ಟದಲ್ಲಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಬಹುತೇಕ ಪಬ್, ಬಾರ್ಗಳು ನೆಲೆಸಿರುವುದು ನಗರ ಪ್ರದೇಶಗಳಲ್ಲಿ. ರಾಜಧಾನಿ ಬೆಂಗಳೂರಿನಲ್ಲಿಯೇ ನೋಂದಾಯಿತ 900ಕ್ಕೂ ಹೆಚ್ಚು ಪಬ್, ಬಾರ್ಗಳಿವೆ. ಈ ಪಬ್, ಬಾರ್ಗಳಲ್ಲಿ ಬಹುತೇಕ ಕಾರ್ಯನಿರ್ವಹಿಸುವವರು ಮಣಿಪುರ, ಮಿಜೋರಾಂ ಹಾಗೂ ಅಸ್ಸೋಂ ಸೇರಿದಂತೆ ಮತ್ತಿತರ ರಾಜ್ಯದವರಾಗಿದ್ದಾರೆ. ಹೀಗಿರುವಾಗ ಸದ್ಯ ಈ ಎಲ್ಲಾ ರಾಜ್ಯದ ಪರಿಸ್ಥಿತಿ ಕರ್ನಾಟಕಕ್ಕೆ ಹೋಲಿಸಿದರೆ ಉತ್ತಮವಾಗಿದ್ದು, ಕೋವಿಡ್ ನಿಯಂತ್ರಣದಲ್ಲಿದೆ.
ಪಬ್, ಬಾರ್ಗಳು ಕಳೆದ ಎರಡು ತಿಂಗಳಿನಿಂದ ಕಾರ್ಯನಿರ್ವಹಿಸದ ಹಿನ್ನೆಲೆ ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದ್ದು, ಕೆಲವರನ್ನ ಕೆಲಸದಿಂದಲೂ ತೆಗೆದಿದ್ದಾರೆ. ಆದರೆ ಜೂನ್ 1 ರಿಂದ ಇಲ್ಲವೇ ನಂತರದ ದಿನಗಳಲ್ಲಿ ಇವನ್ನು ತೆರೆಯಲು ಸರ್ಕಾರದಿಂದ ಪರವಾನಗಿ ಸಿಕ್ಕಾಗ ಲಾಭವಿರಲಿ ಅಥವಾ ನಷ್ಟ ವಿರಲಿ ಹಿಂದಿನಷ್ಟೇ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ಬಾರ್ ಹಾಗೂ ಪಬ್ ಮಾಲೀಕರು ನಾಲ್ಕೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಉಳಿಸಿಕೊಂಡಿದ್ದು, ಐದಾರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದವರನ್ನು ತೆಗೆದು ಹಾಕಿದ್ದಾರೆ.
ಬೆಂಗಳೂರಿನಲ್ಲಿಯೇ ಸರಿಸುಮಾರು ಈ ಕ್ಷೇತ್ರದಲ್ಲಿ 10-15 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಬಹುತೇಕ ಕೆಲಸ ಕಳೆದುಕೊಂಡವರೆಲ್ಲ ತಮ್ಮ ತವರು ಸೇರಿದ್ದಾರೆ. ಇದರಿಂದ ಪಬ್, ಬಾರ್ ತೆರೆದರೂ ಕೆಲಸಗಾರರು ಸಿಗುವುದು ಬಹಳ ಕಷ್ಟವಾಗಿದೆ.
ಸಹಜ ಸ್ಥಿತಿಗೆ ಬರುವುದು ಕಷ್ಟ:
ಪಬ್ ಅಸೋಸಿಯೇಷನ್ ಹಾಗೂ ಹೋಟೆಲ್ ಸಂಘಗಳು ಈಗಾಗಲೇ ಒಂದು ಸಮೀಕ್ಷೆ ನಡೆಸಿದ್ದು, 2021ರ ಸೆಪ್ಟಂಬರ್ ವೇಳೆಗೆ ಹೋಟೆಲ್ ಹಾಗೂ ಪಬ್ ಉದ್ಯಮ ಲಾಕ್ಡೌನ್ ಮುಂಚಿನ ಸ್ಥಿತಿ ಹಾಗೂ ಆದಾಯಗಳಿಕೆ ಹಂತ ತಲುಪಲಿವೆ. ಅಲ್ಲಿಯವರೆಗೂ ಅರ್ಧದಷ್ಟು ಮಾತ್ರ ಆದಾಯ ನಿರೀಕ್ಷಿಸಬಹುದಾಗಿದೆ. ಜನರು ಕೂಡ ಸಾಕಷ್ಟು ಜೀವ ಭಯದಿಂದ ಕೂಡಿದ್ದು, ಬಾಗಿಲು ತೆರೆದ ಮಾತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.
ಮದ್ಯಪಾನ ಪ್ರಿಯರಿಗೆ ಅನಿವಾರ್ಯ:
ಜನ ಸಾಕಷ್ಟು ಒತ್ತಡದಲ್ಲಿ ಜೀವಿಸುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ತಮ್ಮ ಒತ್ತಡ ಮರೆಯಲು ವಾರದ ದಿನಗಳಲ್ಲಿ ಹಾಗೂ ವಾರಾಂತ್ಯ ಪಬ್ ಹಾಗೂ ಬಾರ್ಗಳಿಗೆ ಭೇಟಿ ಕೊಡುತ್ತಾರೆ. ಒತ್ತಡ ಮರೆಯಲು ಇದು ಒಂದು ಉತ್ತಮ ತಾಣ. ಅಲ್ಲದೆ ಮನೆಯಲ್ಲಿ ಪಾರ್ಟಿ ಮಾಡುವುದು ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ತವಲ್ಲ. ಅಕ್ಕಪಕ್ಕದಲ್ಲಿ ಮನೆಗಳು ಇರುವುದರಿಂದ ಮೋಜಿನ ವಾತಾವರಣ ಮನೆಗಳಲ್ಲಿ ಸೃಷ್ಟಿ ಆಗುವುದಿಲ್ಲ. ಇದರಿಂದ ಹೆಚ್ಚಿನ ಯುವಕರು ಈ ತಾಣವನ್ನು ಅವಲಂಬಿಸಿದ್ದಾರೆ.
ಅಲ್ಲದೆ ನಮಗೆ ಬಾಗಿಲು ತೆರೆಯಲು ಅವಕಾಶ ನೀಡಿದರೆ ಸರ್ಕಾರ ಸೂಚಿಸುವ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲು ಸಿದ್ಧವಿದ್ದೇವೆ. ಆಹಾರ ವಿತರಣೆ ಹಾಗೂ ಸಿದ್ಧಪಡಿಸುವ ಕಾರ್ಯವನ್ನು ಕೂಡ ಅತ್ಯಂತ ವ್ಯವಸ್ಥಿತವಾಗಿ ಮಾಡುವ ಭರವಸೆ ನೀಡಿದ್ದೇವೆ. ಈ ಹಿನ್ನೆಲೆ ಹಲವು ಸುರಕ್ಷತಾ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ನಮಗೆ ಪಬ್, ಬಾರ್ ತೆರೆಯಲು ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಜೆ ಪಿ ನಗರ ಎರಡನೇ ಹಂತದ ಧನುಷ್ ಹಾಸ್ಪಿಟಾಲಿಟಿ ಸರ್ವೀಸಸ್ನ ಮಾಲೀಕರಾದ ಧನುಶ್ ಅಡಿಗ ಆರ್. ಅಭಿಪ್ರಾಯಪಟ್ಟಿದ್ದಾರೆ.