ಬೆಂಗಳೂರು: ಕೊರೊನಾ ಸೋಂಕಿನಿಂದ ಖಾಸಗಿ ಬಸ್ ಸಂಸ್ಥೆಗಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಆದ್ದರಿಂದ ಇನ್ನೂ 6 ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ನಂತರದ 6 ತಿಂಗಳು ಶೇಕಡಾ 50ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಅಪರೇಟರ್ಸ್ ಸಂಘದ ಅಧ್ಯಕ್ಷ ನಟರಾಜ ಶರ್ಮಾ ಸರ್ಕಾರಕ್ಕೆ ಒತ್ತಾಯಿಸಿದರು.
ಅಂದಾಜು 3.5 ಸಾವಿರ ಕೋಟಿ ರೂಪಾಯಿ ತೆರಿಗೆ ಭರಿಸುತ್ತಿರುವ ಖಾಸಗಿ ಸಾರಿಗೆ ವಲಯದ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈಗಾಗಲೇ 5 ಬಾರಿ ಮನವಿ ಮಾಡಲಾಗಿದೆ. ಲಕ್ಷಾಂತರ ಚಾಲಕರು ಹಾಗೂ ಬಸ್ಗಳ ಮಾಲೀಕರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಮೊರಾಟೋರಿಯಂ ಅವಧಿ ಆಗಸ್ಟ್ ತಿಂಗಳಿಗೆ ಕೊನೆಯಾಗಲಿದ್ದು, ಅದನ್ನು ಇನ್ನಷ್ಟು ತಿಂಗಳು ಮುಂದುವರೆಸಬೇಕು ಎಂದು ಶರ್ಮಾ ಒತ್ತಾಯಿಸಿದರು.
ಬೇಡಿಕೆಗಳು:
1. 6 ತಿಂಗಳು ತೆರಿಗೆ ವಿನಾಯಿತಿ
2. ನಂತರದ 6 ತಿಂಗಳು ಶೇ.50 ತೆರಿಗೆ ವಿನಾಯಿತಿ
3. ಖಾಸಗಿ ಬಸ್ಗಳಿಗೆ ಬಸ್ ನಿಲ್ದಾಣ ನಿರ್ಮಾಣ
4. ಮೊರಾಟೋರಿಯಂ ಅವಧಿ ವಿಸ್ತರಣೆ
5. ಟೋಲ್ ಶುಲ್ಕ ವಿನಾಯಿತಿ
6. ಡೀಸಲ್ ತೆರಿಗೆ ಕಡಿತ