ಬೆಂಗಳೂರು: ಬಿಬಿಎಂಪಿ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲ ಇರೋದರಿಂದ ಮತ್ತೆ ಮುಂದೂಡಲಾಗಿದೆ.
ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ,ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ ಹಾಗೂ ಉಮಾದೇವಿ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ. ಇನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರೋದರಿಂದ, ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಕೆಲವು ತಾಂತ್ರಿಕ ಸಮಸ್ಯೆಯಿಂದ ಚುನಾವಣೆ ಮುಂದೂಡಲಾಗಿದೆ. ಆಯುಕ್ತರಿಗೆ ಸದಸ್ಯರು ಮನವಿ ಮಾಡಿರುವುದರಿಂದ ಮುಂದೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ನಿರ್ಧರಿಸಲಿದ್ದಾರೆ ಎಂದರು. ಪಕ್ಷದೊಳಗೆಯೇ ಗೊಂದಲವಿದೆಯಾ ಎಂಬ ಪ್ರಶ್ನೆಗೆ, ಗೊಂದಲವೇನಿಲ್ಲ. ಪಾಲಿಕೆ ಸದಸ್ಯರ ಮನವಿ ಮೇರೆಗೆ ಮುಂದೂಡಲಾಗಿದೆ ಎಂದರು.
ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಲೆಕ್ಕಪತ್ರ ಹಾಗೂ ತೋಟಗಾರಿಕೆ ಎರಡೂ ಸ್ಥಾಯಿ ಸಮಿತಿಯಲ್ಲಿ ಆಂಜನಪ್ಪ ಅವರ ಹೆಸರು ಇದೆ. ಹಾಗಾಗಿ ಗೊಂದಲ ಆಗಿದೆ. ಮುಂದಿನ ವಾರ ಮತ್ತೆ ಚುನಾವಣೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂದರು.