ಬೆಂಗಳೂರು : ಲಾಕ್ಡೌನ್ ಸಂದರ್ಭದಲ್ಲಿ ಸೈಲೆಂಟಾಗಿದ್ದ ಪೊಲೀಸರು ಇದೀಗ ಮತ್ತೆ ರೌಡಿಗಳ ಮಟ್ಟ ಹಾಕಲು ಶುರು ಮಾಡಿದ್ದಾರೆ. ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಪೊಲೀಸ್ ಇನ್ಸ್ಪೆಕ್ಟರ್ ಶೂಟ್ ಮಾಡಿರುವ ಘಟನೆ ಬಾಗಲೂರಿನಲ್ಲಿ ನಡೆದಿದೆ.
ಮುನಿಕೃಷ್ಣ ಅಲಿಯಾಸ್ ಕಪ್ಪೆ ಅಲಿಯಾಸ್ ಮುನಿರಾಜು ಗುಂಡೇಟು ತಿಂದ ಆರೋಪಿ. ಲಾಕ್ಡೌನ್ ತೆರವು ನಂತರ ಮದ್ಯದ ಅಂಗಡಿಗಳು ತೆರೆದಿದ್ದವು. ಈ ವೇಳೆ ಗೆಳೆಯ ಮದ್ಯ ಕೊಟ್ಟಿಲ್ಲ ಎನ್ನುವ ವಿಚಾರಕ್ಕೆ ಚಾಕುವಿನಿಂದ ಇರಿದು ಮುನಿಕೃಷ್ಣ ಅಲಿಯಾಸ್ ಕಪ್ಪೆ ಪರಾರಿಯಾಗಿದ್ದ. ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದರ ಜೊತೆಗೆ ಹಲವು ಪ್ರಕರಣಗಳಲ್ಲಿ ಈ ಆರೋಪಿ ಭಾಗಿಯಾಗಿದ್ದ. ಹೀಗಾಗಿ ಅಮೃತಹಳ್ಳಿ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ತಂಡ ಆರೋಪಿಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಆರೋಪಿ ಇಂದು ಬಾಗಲೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.
ಆರೋಪಿಯನ್ನು ಹಿಡಿಯಲು ಅಮೃತಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಹಾಗೂ ತಂಡ ತೆರಳಿದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗೆಂದು ಇನ್ಸ್ಪೆಕ್ಟರ್ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಘಟನೆ ವೇಳೆ ಕಾನ್ಸ್ಟೇಬಲ್ ನಂದೀಶ್ ಎಂಬುವವರಿಗೆ ಗಾಯವಾಗಿದೆ.
ಅಮೃತಹಳ್ಳಿ ಠಾಣೆ ಸೇರಿದಂತೆ ಕೋಡಿಗೆಹಳ್ಳಿ, ಜ್ಞಾನಭಾರತಿ, ಚಿಕ್ಕಜಾಲ ಠಾಣೆಗಳಲ್ಲಿ ಆರೋಪಿ ವಿರುದ್ಧ ಕೊಲೆ ಯತ್ನ, ಹಲ್ಲೆ ಸೇರಿದಂತೆ 8 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುತ್ತವೆ.