ಬೆಂಗಳೂರು: ಅದೃಷ್ಟದ ಕಲ್ಲೆಂದು ಜನರನ್ನು ನಂಬಿಸಿ ಮಾರಾಟ ಮಾಡಲು ಮುಂದಾಗಿದ್ದ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್, ತಿರುಪತಪ್ಪ ಹಾಗೂ ಹರೀಶ್ ಬಂಧಿತ ಆರೋಪಿಗಳು. ಇದರಲ್ಲಿ ಹರೀಶ್ ಎಂಬಾತನಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಕೋವಿಡ್ ಸೆಂಟರ್ಗೆ ಕಳುಹಿಸಲಾಗಿದೆ.

ವೃತ್ತಿಯಲ್ಲಿ ಮೂವರು ಆಟೋ ಚಾಲಕರಾಗಿದ್ದು, ಕೊರೊನಾ, ಲಾಕ್ಡೌನ್ನಿಂದ ವ್ಯಾಪಾರವಿಲ್ಲದೆ ಪರದಾಡುತ್ತಿದ್ದರು. ಈ ವೇಳೆ ಇವರಿಗೆ ಆರ್.ಟಿ ನಗರದ ನಿವಾಸಿ ಮನ್ಸೂರ್ ಎಂಬಾತ ಪರಿಚಯವಾಗಿದ್ದಾನೆ. ಈತ ತನ್ನ ವ್ಯವಹಾರದಲ್ಲಿ ಕೈ ಜೋಡಿಸಿ, ಕೋಟಿಗಟ್ಟಲೆ ಹಣ ಸಂಪಾದಿಸಬಹುದೆಂಬ ಆಸೆ ತೋರಿಸಿದ್ದನಂತೆ.
ಮನ್ಸೂರು ಎಲ್ಲೋ ತಂದಿದ್ದ ಅವೆಂಚರ್ಸ್ ಕಲ್ಲುಗಳನ್ನು ಅದೃಷ್ಟದ ಕಲ್ಲೆಂದು ತೋರಿಸಿ ಇದು 1 ಕೆಜಿ ಇದೆ. ನೀವು ಇದನ್ನು 1 ಕೋಟಿ ಬೆಲೆಗೆ ಮಾರಾಟ ಮಾಡಿದರೆ ನಿಮಗೆ ಇದರಲ್ಲಿ ಪಾಲು ಸಿಗುತ್ತೆ ಎಂದಿದ್ದಾನೆ. ಇದಕ್ಕೆ ಸರಿ ಎಂದು ಈ ಮೂವರು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನ ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ಗಾಗಿ ಬಲೆ ಬೀಸಿದ್ದಾರೆ.