ಬೆಂಗಳೂರು: ಕೊರೊನಾ ವೈರಸ್ ಸೋಂಕಿತರಿಗೆ ವೈದ್ಯಕೀಯ ಸೇವೆ ನೀಡಲು ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ನಗರದಲ್ಲಿ ಖಾಲಿ ಇರುವ ಅಪಾರ್ಟ್ಮೆಂಟ್ಗಳನ್ನು ಸರ್ಕಾರ ಬಳಸಿಕೊಳ್ಳಲು ನಿರ್ದೇಶಿಸುವಂತೆ ಕೋರಿ ವಕೀಲ ಶಾಮ್ ಸುಂದರ್ ಹೈಕೋರ್ಟ್ಗೆ ತುರ್ತು ಪಿಐಎಲ್ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಸರ್ಕಾರ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಶ್ರಮಿಸುತ್ತಿದೆ. ಶಂಕಿತರನ್ನು ಕ್ವಾರಂಟೈನ್ನಲ್ಲಿಡಲು ಹಾಗೂ ವೈದ್ಯಕೀಯ ಸೇವೆ ಒದಗಿಸಲು ಕಲ್ಯಾಣ ಮಂಟಪ, ರೈಲ್ವೆ ಬೋಗಿಗಳನ್ನು ಕಾಯ್ದಿರಿಸಲು ಸರ್ಕಾರ ಪರದಾಡುತ್ತಿದೆ. ಇಲ್ಲಿ ಮೂಲ ಸೌಕರ್ಯ ಒದಗಿಸುವುದು ಕಷ್ಟದ ಜೊತೆಗೆ ದುಬಾರಿಯಾಗಲಿದೆ. ಅದರ ಬದಲಿಗೆ ಖಾಲಿ ಇರುವ ಅಪಾರ್ಟ್ಮೆಂಟ್ಗಳನ್ನು ಬಳಸಿಕೊಳ್ಳಬಹುದು.
ಬೆಂಗಳೂರು ಅಪಾರ್ಟ್ಮೆಂಟ್ಗಳ ನಗರವಾಗಿದೆ. ರಾಜ್ಯದ ಇತರ ನಗರಗಳಲ್ಲೂ ಖಾಲಿ ಉಳಿದಿರುವ ಅಪಾರ್ಟ್ಮೆಂಟ್ಗಳಿಗೆ ಬರವಿಲ್ಲ. ಈಗಾಗಲೇ ಹಲವು ಅಪಾರ್ಟ್ಮೆಂಟ್ಗಳು ವಾಸಕ್ಕೆ ಸಿದ್ಧಗೊಂಡಿದ್ದರೂ ಖಾಲಿ ಉಳಿದಿವೆ. ಇಂತಹ ಅಪಾರ್ಟ್ಮೆಂಟ್ಗಳ ಮಾಹಿತಿ "ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ' (ರೇರಾ) ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಬಳಿ ಇದೆ. ಅವರಿಂದ ಮಾಹಿತಿ ಸಂಗ್ರಹಿಸಿ ಖಾಲಿ ಇರುವ ಅಪಾರ್ಟ್ಮೆಂಟ್ಗಳನ್ನು ಕೆಲಕಾಲ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬಹುದು.
ಅಪಾರ್ಟ್ಮೆಂಟ್ಗಳಲ್ಲಿ ಎಲ್ಲಾ ರೀತಿ ಸುಸಜ್ಜಿತ ಮೂಲ ಸೌಕರ್ಯಗಳು ಇರುತ್ತವೆ. ಹಾಗಾಗಿ, ಮೂಲ ಸೌಕರ್ಯಗಳನ್ನು ಹೊಂದಿಸಿಕೊಳ್ಳುವ ಅವಶ್ಯಕತೆ ಬೀಳುವುದಿಲ್ಲ. ಇದರ ಬದಲಿಗೆ ಮಾಲೀಕರಿಗೆ ಒಂದಿಷ್ಟು ಬಾಡಿಗೆ ನೀಡಿ, ಉಪಯೋಗಿಸಿಕೊಂಡ ಬಳಿಕ ಸ್ವಚ್ಛಗೊಳಿಸಿ ಮಾಲೀಕರಿಗೆ ಒಪ್ಪಿಸಬಹುದು. ಕೊರೊನಾ ಚಿಕಿತ್ಸೆಗೆ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಸೇವೆ ಪಡೆದುಕೊಳ್ಳಬೇಕು. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್, ಹೋಂಗಾರ್ಡ್, ಇತರ ಸ್ವಯಂ ಸೇವಾ ಸಂಸ್ಥೆಗಳ ಸೇವೆ ಪಡೆದುಕೊಳ್ಳಬಹುದು. ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಲು ಪಿಐಎಲ್ ತುರ್ತಾಗಿ ಪರಿಗಣಿಸಬೇಕು ಎಂದು ವಕೀಲ ಶ್ಯಾಮ್ಸುಂದರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.