ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಾಡಹಾಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.
ಜುಲೈ 2 ರಂದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ದೇವಾಲಯ ಬಳಿ, ಲಕ್ಕಸಂದ್ರ ನಿವಾಸಿ ಮದನ್ ಎಂಬಾತನನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆಯ ವಿವರ:
ಬನಶಂಕರಿ ದೇವಾಲಯದ ಮುಂದೆ ಮೆಟ್ರೋ ಪಿಲ್ಲರ್ ಬಳಿ ಜುಲೈ 2ರಂದು ಮಧ್ಯಾಹ್ನ ಮದನ್ ಸೊಪ್ಪು ಖರೀದಿಸಿ ಪಾರ್ಕ್ ಮಾಡಿದ್ದ ಕಾರಿನ ಬಳಿ ಬರುತ್ತಿದ್ದ. ಈ ವೇಳೆ ಪೂರ್ವಯೋಜಿತ ಸಂಚಿನಂತೆ ಮೂರು ಬೈಕ್ ನಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿ ಕೃತ್ಯ ಎಸಗಿದ್ದರು.
ಇದನ್ನೂ ಓದಿ : ಬನಶಂಕರಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ಕೊಲೆಯಾದ ಮದನ್ ಲಕ್ಕಸಂದ್ರ ನಿವಾಸಿಯಾಗಿದ್ದು, ವಿಲ್ಸನ್ ಗಾರ್ಡನ್ನಲ್ಲಿ ಕೆಲಸ ಮಾಡುತ್ತಿದ್ದ. 2018 ರಲ್ಲಿ ಲಕ್ಕಸಂದ್ರ ವಿಜಿ ಎಂಬಾತನ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಈತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿ ಲಿಂಗನ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಮದನ್ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ. ಸದ್ಯ ಈ ಎರಡು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.