ಬೆಂಗಳೂರು: ನಾವೂ ಎಲ್ಲಿಗೆ ಹೋದರೂ ತವರು ಸಂಸ್ಕೃತಿ ಮರೆಯಬಾರದು. ರೊಟ್ಟಿ ಊಟದ ಅನುಭವ, ಖುಷಿ ನೀಡುತ್ತದೆ ಎಂದು ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಹೇಳಿದರು.
ಇಲ್ಲಿನ ಮಹದೇವಪುರ ಸಮೀಪದ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಹೊಸ ವರ್ಷ ಮತ್ತು ಸಂಕ್ರಾಂತಿ ಅಂಗವಾಗಿ ರೊಟ್ಟಿ ಹಬ್ಬದ 12ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಜನರು ಬಹಳ ಸಹೃದಯ ಸ್ವಭಾವದವರು. ನಾವು ಯಾವುದೇ ಭಾಗದಲ್ಲಿ ಹುಟ್ಟಲಿ, ಪ್ರಾಂತೀಯ ಭಾಷಾ ರೀತಿ ಹೇಗೇ ಇರಲಿ, ರಾಜ್ಯದ ಯಾವುದೇ ಮೂಲೆಯಲ್ಲಿದ್ದರು ನಾವೆಲ್ಲರೂ ಕನ್ನಡಿಗರು. ಈ ಭಾಗದ ರೊಟ್ಟಿ ವಿದೇಶಕ್ಕೆ ಕಳಿಸುವ ಆಹಾರವಾಗಿದೆ. ಆರೋಗ್ಯ ಕರವಾದ ಜೀವನಕ್ಕಾಗಿ ಉತ್ತರ ಕರ್ನಾಟಕ ಆಹಾರ ಉತ್ತಮ ಎಂದು ಅಭಿಪ್ರಾಯಪಟ್ಟರು.
ಇಲ್ಲಿನ ಚಟುವಟಿಕೆಗಳ ಅನುಕೂಲಕ್ಕಾಗಿ ಸರ್ಕಾರವೂ ನಿವೇಶನ ನೀಡಿ, ಭವನ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಸಂಘದಿಂದ ಮನವಿ ಮಾಡಿದರು.
ಮಲೇಷಿಯಾದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ ವಿಜೇತರಿಗೆ ಹಾಗೂ ಗಿನ್ನಿಸ್ ದಾಖಲೆಗೆ ಸೇರಿರುವ ಡ್ಯಾನ್ಸ್ 7 ದಿ ಆರ್ಟ್ ಫ್ಯಾಕ್ಟರಿ ತಂಡದವರಿಗೆ ಸನ್ಮಾನ ಮಾಡಲಾಯಿತು.
ಎಲ್ಲರೂ ಕಡಕ್ ರೊಟ್ಟಿ, ಶೇಂಗಾ ಚಟ್ನಿ, ಎಣ್ಣಿ ಬದನೆಕಾಯಿ, ಕೆನೆ ಮೊಸರು, ಬೆಲ್ಲದ ಪಾಯಾಸ ಹೀಗೆ ಹತ್ತು ಹಲವು ಉತ್ತರ ಕರ್ನಾಟಕ ಭಾಗದ ಖ್ಯಾದ್ಯಗಳನ್ನು ಸವಿಯಲಾಯಿತು. ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ನೆರೆದಿದ್ದ ಜನರು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕೆಂಗೇರಿಯ ಶಿವಾನಂದ ಸ್ವಾಮೀಜಿ, ಸಂಸದ ಪಿ.ಸಿ ಮೋಹನ್, ಶಾಸಕ ಬೈರತಿ ಬಸವರಾಜ್, ಹಾಸ್ಯ ಕಲಾವಿದರು ರವಿ ಬಜಂತ್ರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಅನಂತ ರಾಮಯ್ಯ ಇದ್ದರು.