ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೊರಟಿದ್ದ ನಾಗೇಶ್ಗೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆವೊಡ್ಡಿದ್ದರು. ಆಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದ ಬಳಿಕ ವಿಮಾನ ಏರಲು ನಾಗೇಶ್ಗೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.
ಹೌದು, ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಆಪ್ತರಿಗೂ ಮತ್ತು ಯಡಿಯೂರಪ್ಪ ಆಪ್ತರಿಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ಮುಂಬೈಗೆ ಹೋಗೋದನ್ನ ತಡೆಯಲು ಬಂದ ಪರಮೇಶ್ವರ್ ಬೆಂಬಲಿಗರು ವಿಮಾನ ಏರಲು ಅಡ್ಡಿಪಡಿಸಿದ್ದರು ಎನ್ನಲಾಗ್ತಿದೆ.
ಈ ವೇಳೆ ಗದ್ದಲ ಹಾಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ವಿಚಾರದಲ್ಲಿ ಸಂತೋಷ್ ಹಾಗೂ ಪರಮೇಶ್ವರ್ ಆಪ್ತರು, ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಹೆಚ್ಎಎಲ್ ಪೊಲೀಸರಿಗೆ ಕರೆ ಮಾಡಿದ್ದ ಡಿಸಿಎಂ ಅವರು ಪಕ್ಷೇತರ ಶಾಸಕ ನಾಗೇಶ್ ಅವರನ್ನು ತಡೆಯಲು ಹೇಳಿದ್ದರು ಎಂದು ಹೇಳಲಾಗ್ತಿದೆ.
ಆಪ್ತರ ಮೂಲಕ ವಿಷಯ ತಿಳಿದ ಯಡಿಯೂರಪ್ಪ ಹೆಚ್ಎಎಲ್ ಪೊಲೀಸರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗೇಶ್ ಅವರನ್ನ ಒಳಗೆ ಕಳಿಸಿ ಎಂದು ಖಡಕ್ ಸೂಚನೆ ನೀಡಿದ್ದರು. ಒಳಗೆ ಬಿಡಲಿಲ್ಲ ಅಂದ್ರೆ ದೆಹಲಿಯಿಂದ ಫೋನ್ ಬರುತ್ತದೆ ಎಂದು ಏರು ಧ್ವನಿಯಲ್ಲಿ ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಎಸ್ವೈ ಫೋನ್ ಮಾಡುತ್ತಿದ್ದಂತೆ ನಾಗೇಶ್ ಅವರನ್ನ ಒಳ ಕಳುಹಿಸಿದ ಪೊಲೀಸರು ವಿಮಾನ ಏರಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.