ಬೆಂಗಳೂರು: ಇನ್ಮುಂದೆ ಗುಪ್ತಚರ ಇಲಾಖೆಗೆ ಪೊಲೀಸ್ ಇಲಾಖೆಯಿಂದ ಅಧಿಕಾರಿಗಳ ವರ್ಗಾವಣೆ ಮಾಡುವ ಬದಲು, ಪ್ರತ್ಯೇಕವಾಗಿ ನೇಮಕಾತಿ ಮಾಡಿಕೊಂಡು ಅಗತ್ಯ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಳೆದ ಆರು ವರ್ಷದಲ್ಲಿ 3,365 ಪಿಎಸ್ಐ, 35,521 ಪೊಲೀಸ್ ಕಾನ್ಸ್ಟೇಬಲ್ಗಳ ನೇಮಕ ಮಾಡಲಾಗಿದೆ. ರಾಜ್ಯದ ಜನಸಂಖ್ಯೆಗೆ ಪೊಲೀಸರ ಅನುಪಾತ 577 ಇದೆ. ಐದು ವರ್ಷದ ಹಿಂದೆ 35 ಸಾವಿರ ಹುದ್ದೆ ಖಾಲಿ ಇತ್ತು. ಆದರೆ ಈಗ ಎಸ್ಐ ನೇಮಕಾತಿ ಆಗಿದೆ. ಅವರೆಲ್ಲಾ ತರಬೇತಿಯಲ್ಲಿದ್ದಾರೆ. ಟ್ರೈನಿಂಗ್ ಮುಗಿಸಿ ಬಂದರೆ ಎಲ್ಲಾ ಹುದ್ದೆ ಭರ್ತಿಯಾದಂತಾಗಲಿದೆ. ಕಾನ್ಸ್ಟೇಬಲ್ ನೇಮಕಾತಿಯೂ ಆಗುತ್ತಿದೆ. ಪ್ರತಿ ವರ್ಷ ನಾಲ್ಕು ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಕೆಲ ಪ್ರಕರಣಗಳಲ್ಲಿ ಆರೋಪಿಯ ಆರೋಪ ಸಾಬೀತಿಗೆ ಡಿಎನ್ಎ ಪರೀಕ್ಷೆ ಅಗತ್ಯವಿದೆ. ಶಿಕ್ಷೆಯಾಗಲು ಎಫ್ಎಸ್ಎಲ್ ಲ್ಯಾಬ್ ಅಗತ್ಯ. ಸದ್ಯ ಆರು ಎಫ್ಎಸ್ಎಲ್ ಲ್ಯಾಬ್ ಇವೆ. ಈಗ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಲ್ಯಾಬ್ ಆರಂಭಿಸಿದ್ದು ಬಜೆಟ್ ನಂತರ ಶಿವಮೊಗ್ಗದಲ್ಲಿಯೂ ಒಂದು ಎಫ್ಎಸ್ಎಲ್ ಲ್ಯಾಬ್ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಟ್ರಾಫಿಕ್ ಬಗ್ಗೆ ವಿಶೇಷ ಗಮನ ಕೊಡುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ದೂರು ಬಂದ ಕಾರಣಕ್ಕೆ ಟೋಯಿಂಗ್ ವ್ಯವಸ್ಥೆ ಸ್ಥಗಿತ ಮಾಡಲಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಗುಪ್ತಚರ ಇಲಾಖೆಯನ್ನು ಬಲಪಡಿಸಬೇಕಿದೆ. ಅಲ್ಲಿಗೆ ಬೇರೆ ಕಡೆಯಿಂದ ವರ್ಗಾವಣೆ ಮಾಡುವ ಬದಲು ಪ್ರತ್ಯೇಕ ನೇಮಕ ಮತ್ತು ತರಬೇತಿ ಕೊಡುವ ಚಿಂತನೆ ಇದೆ. ಸದ್ಯ ಅದು ಪನಿಷ್ಮೆಂಟ್ ಟ್ರಾನ್ಸ್ಫರ್ ರೀತಿ ಆಗುತ್ತಿದೆ. ನಮ್ಮ ಪೊಲೀಸರನ್ನೇ ಯಾವುದೋ ಕಾರಣಕ್ಕೆ ಅಲ್ಲಿಗೆ ವರ್ಗಾಯಿಸಲಾಗುತ್ತಿದೆ. ಇದು ಆಗಬಾರದು, ಗುಪ್ತಚರ ವೈಫಲ್ಯದಿಂದ ದೊಡ್ಡ ಅನಾಹುತಗಳು ಸಂಭವಿಸಲಿವೆ. ಹಾಗಾಗಿ ಪ್ರತ್ಯೇಕ ನೇಮಕಾತಿ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ ಎಂದರು.
ಎಸ್ಟೇಟ್ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಕ್ರಮ :
ಕೊಡಗು ಮತ್ತು ಮಲೆನಾಡಿನ ಎಸ್ಟೇಟ್ಗಳಲ್ಲಿ ಬಾಂಗ್ಲಾ ವಲಸಿಗರು ಕೂಲಿ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲೆಸಿರುವ ಮಾಹಿತಿ ಇದ್ದು, ಈ ಕುರಿತು ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಸ್ಟೇಟ್ಗಳಲ್ಲಿ ಅಸ್ಸೋಂ, ಪಶ್ಚಿಮ ಬಂಗಾಳದಿಂದ ಬಂದಿರುವುದಾಗಿ ಹೇಳುತ್ತಿರುವ ಬಾಂಗ್ಲಾದವರಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಆಯಾ ಠಾಣೆಗಳ ವ್ಯಾಪ್ತಿಯ ಎಸ್ಟೇಟ್ಗಳಲ್ಲಿ ಹೊಸ ಕಾರ್ಮಿಕರ ಪತ್ತೆಗೆ ಸೂಚನೆ ನೀಡಲಾಗಿದೆ ಎಂದರು.
ಅಸ್ಸೋಂ ಇತ್ಯಾದಿ ಕಡೆಯಿಂದ ಬರುವಾಗಲೇ ಅಲ್ಲಿಯ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ತಂದಿರುತ್ತಾರೆ. ಬಂದವರ ಮೇಲೆ ವಿಶೇಷ ನಿಗಾಗೆ ಸೂಚಿಸಲಾಗಿದೆ. ಅವರನ್ನು ವಿಚಾರಿಸಿದರೆ ಪಶ್ಚಿಮ ಬಂಗಾಳ, ಅಸ್ಸೋಂನ ಹಳ್ಳಿಗಳ ಹೆಸರು ಹೇಳುತ್ತಾರೆ, ನಾವು ಅಲ್ಲಿನ ಹಳ್ಳಿಯವರು ಎನ್ನುತ್ತಾರೆ, ಅದನ್ನು ಪರಿಶೀಲಿಸಲು ಸೂಚಿಸಿದ್ದೇನೆ.
ಕೊಡಗು, ಮಲೆನಾಡಿನ ಒಂಟಿ ಮನೆಗಳಿಗೆ ಭದ್ರತೆ ಅಗತ್ಯವಿದೆ ಎಂದು ಸದಸ್ಯೆ ವೀಣಾ ಅಚ್ಚಯ್ಯ ಕೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ಇದ್ದೆಡೆ ಭದ್ರತೆ ಕೊಡಲಾಗುತ್ತದೆ. ಆದರೆ ಎಲ್ಲಾ ಕಡೆ ನಿಗಾ ವಹಿಸಲಿದ್ದೇವೆ. ಸಿಸಿಟಿವಿ ಅಳವಡಿಸಿಕೊಳ್ಳಿ ಎಂದು ನಾವು ಸಲಹೆ ನೀಡಿದ್ದೇವೆ. ಬಹಳ ಕಡೆ ಅಳವಡಿಸಿಕೊಂಡಿದ್ದಾರೆ. ಒಂಟಿಮನೆಗಳ ರಕ್ಷಣೆಗೆ ಬದ್ದವಾಗಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಸದನಕ್ಕೆ ತಿಳಿಸಿದರು.