ಬೆಂಗಳೂರು: ಬಾಡಿ ಬಿಲ್ಡಿಂಗ್ನಲ್ಲಿ ಹೆಚ್ಚು ಸದ್ದು ಮಾಡಿರುವ ಕನ್ನಡಿಗರು ಕಡಿಮೆ. ಆದರೆ ಕರ್ನಾಟಕದ ಒಂದು ಚಿಕ್ಕ ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ವ್ಯಾಸಂಗ ಮುಂದುವರೆಸುತ್ತಾ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದಾರೆ ಕಿರಣ್ ಕುಮಾರ್.
ಮಹದೇವಪುರದ ವರ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲೂಕಿನ ಚಿನ್ನಪಲಿ ಗ್ರಾಮದ ಪ್ರಕಾಶ್ ರೆಡ್ಡಿ, ಮುನಿರತ್ನಮ್ಮ ಅವರ ಪುತ್ರ ಕಿರಣ್ ಕುಮಾರ್ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ.
ಇವರು 16ರ ವಯಸ್ಸಿನಲ್ಲೇ ದೇಹ ದಂಡಿಸಲು ವರ್ತೂರಿನ ಜಿಮ್ ಒಂದರಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದಾರೆ. 2018 ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಅದೇ ವರ್ಷ ಡಿಸೆಂಬರ್ನಲ್ಲಿ 'ಮಾರ್ಷಲ್ ಮೈನ' ಎಂಬ ಸ್ಪರ್ಧೆಯಲ್ಲೂ ಭಾಗವಹಿಸಿ ಒಂದು ಚಿನ್ನ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದಿದ್ದರು.
ಡಬ್ಲ್ಯೂಪಿಸಿ ಪವರ್ ಲಿಫ್ಟಿಂಗ್ ರಾಷ್ಟ್ರೀಯ ಮಟ್ಟದ ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆಯುವ ಮೂಲಕ ಕಿರಣ್ ಕುಮಾರ್ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇದೇ ತಿಂಗಳ 9,10,11 ರಂದು ನಡೆದ ಬೆಂಗಳೂರಿನ ಸರ್ಜಾಪುರ ಸಮೀಪ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಮತ್ತು ವರ್ಲ್ಡ್ ಪವರ್ ಲಿಫ್ಟಿಂಗ್ ಕಾಂಗ್ರೆಸ್ ಇಂಡಿಯಾ ಹಮ್ಮಿಕೊಂಡಿದ ರಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 3 ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.
2018ರಲ್ಲಿ ಅಂತರ್ರಾಜ್ಯ ಮಟ್ಟ ಕ್ರೀಡಾಕೂಟದಲ್ಲಿ ಅತ್ಯಂತ ಕಿರಿಯ 18 ವರ್ಷದ ವಯಸ್ಸಿಗೆ ಗೋಲ್ಡ್ ಮೆಡಲ್ ಪಡೆದ ಕೀರ್ತಿ ಇವರ ಹೆಸರಲ್ಲಿದೆ.
2019 ರಲ್ಲಿ(INB) ಏಷ್ಯಾ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಒಂದು ರನ್ನರ್ ಅಪ್ ಮತ್ತು ಮೂರು ಕಂಚಿನ ಪದಕ ಗಳಿಸಿದರು.
2020 ರಲ್ಲಿ ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜ್ನಲ್ಲಿ ಬೆಂಗಳೂರು ನಾರ್ತ್ ಯೂನಿವರ್ಸಿಟಿ ಏರ್ಪಡಿಸಿದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಗಳಿಸಿದ್ದಾರೆ.