ಬೆಂಗಳೂರು: ಅಯೋಧ್ಯೆ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಸತ್ಯ ಮೇವ ಜಯತೆಗೆ ಎಂಬ ಉಕ್ತಿಗೆ ಇನ್ನಷ್ಟು ಶಕ್ತಿ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದೊಂದು ಭಾರತೀಯ ಭಾವೈಕ್ಯತೆಯ ತೀರ್ಪಾಗಿದ್ದು, ಸುಪ್ರೀಂ ಭಾರತದ ಏಕತೆಯನ್ನು ಎತ್ತಿ ತೋರಿಸುವ ತೀರ್ಪನ್ನು ನೀಡಿದೆ ಇದನ್ನು ಬಿಜೆಪಿ ಸ್ವಾಗತಿಸುತ್ತಿದೆ ಎಂದರು.
ಒಂದುವರೆ ಶತಮಾನದ ಸಮಸ್ಯೆಗಿದ್ದ ಅಯೋಧ್ಯೆ ವಿವಾದ ಪ್ರಕರಣದಲ್ಲಿ, ಸುಪ್ರೀಂಕೋರ್ಟ್ನ ಪಂಚಪೀಠ ನ್ಯಾಯಾಧೀಶರು ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾನು ಹರ್ಷ ವ್ಯಕ್ತಪಡಿಸುತ್ತೇನೆ. ರಾಜ್ಯದಲ್ಲಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕು, ರಾಮ ಮಂದಿರ ರಾಷ್ಟ್ರ ಮಂದಿರವಾಗಬೇಕು ಎಂದು ಹೇಳಿದರು.
ಇಲ್ಲಿ ಯಾರಿಗೂ ಸೋಲು ಗೆಲುವಾಗಿಲ್ಲ, ಆದ್ದರಿಂದ ಇದು ವಿಜಯದ ಸಂಭ್ರಮ ಆಚರಣೆ ಮಾಡುವ ಸಮಯವಲ್ಲ. ಪಕ್ಷದಿಂದ ಯಾವುದೇ ಆಚರಣೆ ಸಂಭ್ರಮ ನಡೆದಿಲ್ಲ, ಆದರೆ ವ್ಯಯಕ್ತಿಕವಾಗಿ ಕೆಲವರು ಸಂಭ್ರಮ ಮಾಡಿದ್ದಾರೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಯಕ್ತಿಕ ಸಂಭ್ರಮಾಚರಣೆಯು ಅದು ಅವರ ಹಕ್ಕು ಎಂದ ಕಟೀಲ್, ಪರೋಕ್ಷವಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡರು.