ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿ ಆದರೆ ಕೆಲ ಅಮಾಯಕರನ್ನು ಬಂಧಿಸಿದ್ದಾರೆ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಮುಸ್ಲಿಂ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮೌಲಾನಾ ಸಗೀರ್ ಅಹಮದ್ ರಷಿದ್ ನೇತೃತ್ವದ ಮುಸ್ಲಿಂ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉಪಸ್ಥಿತರಿದ್ದರು.
ಚರ್ಚೆ ವೇಳೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ ಅದಕ್ಕೆ ಸರ್ಕಾರದ ಪರವಾಗಿ ನಾವು ಇರುತ್ತೇವೆ. ಆದರೆ ಅಮಯಾಕರನ್ನು ಬಿಟ್ಟುಬಿಡಿ ಎಂದು ನಿಯೋಗ ಮನವಿ ಸಲ್ಲಿಸಿತು. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ, ಮುಸ್ಲಿಂ ದೇವರುಗಳ ಬಗ್ಗೆ ಅವಹೇಳನ ಪೋಸ್ಟ್ಗಳು, ಸುಳ್ಳು ಸುದ್ದಿಗಳು ಬರುತ್ತಿದೆ. ಇದರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂಗೆ ಮನವಿ ಮಾಡಲಾಯಿತು.