ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕದನ ವಿರಾಮ ಬಗ್ಗೆ ನನ್ನ ಗಮನ ಇಲ್ಲ. ನನ್ನ ಗಮನ ಏನಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.
ಇಂದು ರಾಜಭವನದ ಬಳಿ ಮಾತನಾಡಿದ ಅವರು, ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು. ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲರ ಗಮನಕ್ಕೆ ತಂದಿದ್ದೇನೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತಷ್ಟೇ ಎಂದ್ರು.
ಸಂಸತ್ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪ ಮಾಡ್ತೇನೆ. ಈ ಸಂಬಂಧ ಸಿಎಂ ಅವರನ್ನೂ, ಗಣಿ ಸಚಿವರನ್ನೂ ಭೇಟಿ ಮಾಡ್ತೇನೆ. ನಾನು ಸಮಸ್ಯೆ ಸೃಷ್ಟಿಸಿಲ್ಲ. ಯಾರು ಸಮಸ್ಯೆ ಸೃಷ್ಟಿಸಿದ್ದಾರೋ ಅವರು ಅರ್ಥ ಮಾಡಿಕೊಂಡರೆ ಸಾಕು. ಅವರೇ ಅದಕ್ಕೆ ತೆರೆ ಎಳೆಯಲಿ ಎಂದು ಹೇಳಿದ್ರು.
ಅಕ್ರಮ ಗಣಿಗಾರಿಕೆ ನಿಲ್ಲಿಸುವ ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಕಷ್ಟ ಅಂತ ನನಗೂ ಗೊತ್ತು. ಆದರೆ ನನ್ನ ಪ್ರಯತ್ನವನ್ನು ನಾನು ಮಾಡುತ್ತೇನೆ. ಸಚಿವ ನಿರಾಣಿಯವರ ಸಮಯ ಕೇಳಿದ್ದೇನೆ. ದಾಖಲೆ ಕೊಡುವುದು ನನ್ನ ಕೆಲಸ ಅಲ್ಲ. ಸಮಸ್ಯೆಯನ್ನು ನಾನು ಮಾಡಿಲ್ಲ. ಸಮಸ್ಯೆ ತಂದವರು ಅದನ್ನ ಬಗೆಹರಿಸಿಕೊಂಡು ಹೋಗಲಿ ಎಂದು ಹೆಚ್ಡಿಕೆಗೆ ಸುಮಲತಾ ಟಾಂಗ್ ಕೊಟ್ಟರು.
ಅಂಬರೀಶ್ ಅಭಿಮಾನಿಗಳಿಂದ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಅವರ ಲಕ್ಷಾಂತರ ಅಭಿಮಾನಿಗಳಿಗೂ ಈ ಗೊಂದಲದಿಂದ ನೋವಾಗಿದೆ. ಆದರೆ ನಾವು ಅವರ ದಾರಿಯಲ್ಲಿ ಹೋಗುವುದು ಬೇಡ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವೆ. ನಾವು ಶಾಂತಿಯಿಂದ ನಮ್ಮ ನೋವುಗಳನ್ನು ಬಗೆಹರಿಸಿಕೊಳ್ಳೋಣ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ದೆಹಲಿಯಲ್ಲಿ ಇರುವಾಗ ಮಂಡ್ಯದಲ್ಲಿ ಇರಲ್ಲ ಎಂದು ಟ್ರೋಲ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದೆ, ನನ್ನ ಟ್ರೋಲ್ ಮಾಡಿದ್ರೆ ಜನ ನಂಬಲ್ಲ. ಜನರಿಗೂ ಗೊತ್ತಿದೆ. ಸಂಸತ್ ನಡೆಯುವುದರಿಂದ ನಾನು ಅಲ್ಲಿ ಇರ್ತಿನಿ. ಜನರಿಗೂ ಇದು ಗೊತ್ತಾಗುತ್ತದೆ ಎಂದರು.