ಬೆಂಗಳೂರು: ಕಳೆದ ಒಂದೂವರೆ ತಿಂಗಳಿಂದ ಲಾಕ್ಡೌನ್ ಸಮಯದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೇ ಅವಿರತವಾಗಿ ಜನರ ಸೇವೆ ಮಾಡುತ್ತಿದ್ದೇನೆ. ಆದ್ರೀಗ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದ್ಯಾವುದಕ್ಕೂ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಅವರು, ಮಸ್ಕತ್ನಲ್ಲಿ ಕೇರಳದ ಹಿಂದೂ ಡ್ರೈವರ್( ಬಿಜೆಪಿ ಕಾರ್ಯಕರ್ತ)ನಿಗೆ ಜಿಹಾದಿಗಳಿಂದ ಕಪಾಳಮೋಕ್ಷ ಮಾಡಲಾಯ್ತು. ಅದರ ವಿರುದ್ಧ ಸಿಡಿದೇಳುವ ಕೆಲಸ ಮಾಡಿದ ನಾನು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದೆ. ಇದಾದ ನಂತರ ನನಗೆ ನೂರಾರು ಬೆದರಿಕೆ ಕರೆಗಳು ಬಂದಿವೆ. ಅನೇಕ ವ್ಯಕ್ತಿಗಳು ಅನಾವಶ್ಯಕವಾಗಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನೆಲ್ಲಾ ನಾನು ದೆಹಲಿಯಲ್ಲಿಯೂ ಹೇಳಿದ್ದೇನೆ : ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ಹೇಳಿಕೆಗಳು ಕಂಡು ಬರುತ್ತಿವೆ. ಕಳೆದ ಎರಡು ಮೂರು ವರ್ಷಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟರೂ ಈವರೆಗೂ ಕಂಡು ಹಿಡಿಯುವ ಕೆಲಸ ಮಾಡಿಲ್ಲ. ಅಲ್ಲದೇ ಇಂಟರ್ನೆಟ್ ಕರೆ ಎನ್ನುವ ಕಾರಣಕ್ಕೆ ಪತ್ತೆಯಾಗಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಇದನ್ನೆಲ್ಲಾ ನಾನು ದೆಹಲಿಯಲ್ಲಿಯೂ ಹೇಳಿದ್ದೇನೆ ಎಂದರು.
ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು: ಲಾಕ್ಡೌನ್ ಜಾರಿಯಾದಾಗಿನಿಂದಲೂ ಬಡವರಿಗೆ, ಹಸಿದವರಿಗೆ ಆಹಾರ ಪದಾರ್ಥವನ್ನು ಒದಗಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಕ್ಷೇತ್ರದ ಜನರಿಗೆ ನಾನೆಂದೂ ಅನ್ಯಾಯ ಮಾಡಿಲ್ಲ. ದಯವಿಟ್ಟು ನಮ್ಮ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.