ಬೆಂಗಳೂರು: ಯಡಿಯೂರಪ್ಪರಿಗೆ ಇತ್ತೀಚೆಗೆ ಕನಸು ಬೀಳೋದು ಜಾಸ್ತಿಯಾಗಿರಬೇಕು ಎಂದು ಉಪ ಚುನಾವಣೆ ಬಳಿಕ ಪ್ರತಿಪಕ್ಷ ನಾಯಕರ ಬದಲಾವಣೆ ಆಗುತ್ತೆ ಎಂಬ ಸಿಎಂ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಯಾವ ಶಾಸಕರೂ ಸಿದ್ದರಾಮಯ್ಯ ಬದಲಾವಣೆ ಮಾಡ್ತೀವಿ ಅಂದಿಲ್ಲ. ನಮ್ಮ ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಬಗ್ಗೆ ಮಾತಾಡಿಲ್ಲ. ಆದರೆ ಯಡಿಯೂರಪ್ಪ ಅವರಿಗೆ ಕನಸು ಬಿದ್ದಿರಬೇಕು. ಅದಕ್ಕೆ ಹೀಗೆ ಮಾತಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆ ಬಳಿಕ ನೋಡಿ ಗೊತ್ತಾಗುತ್ತದೆ. ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗಆಗಬಹುದು. ಯತ್ನಾಳ್ ವಿರುದ್ಧ ಇನ್ನೂ ಬಿಜೆಪಿ ಕ್ರಮ ತಗೊಂಡಿಲ್ಲ, ಯಾಕೆ?. ಅದರರ್ಥ ಯತ್ನಾಳ್ಗೆ ಸುಮ್ನಿರಪ್ಪ ಅಂದಿರಬೇಕು. ಬಿಜೆಪಿ ಒಳಗೆ ಏನೋ ನಡೀತಿದೆ ಅನ್ನೋದು ಇದು ತೋರಿಸ್ತಿದೆ. ಈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತೋ ಕಾದು ನೋಡಿ ಎಂದರು.
ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲ್ಲ: ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲ್ಲ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಅಗತ್ಯ ಇದ್ದರೆ ದಾಖಲೆ ಬಿಡುಗಡೆ ಮಾಡ್ತೀವಿ ಅಂದಿದ್ದೆ. ಆದ್ರೆ ಈಗ ಚುನಾವಣೆ ಮುಗಿದಿದೆ. ಹೀಗಾಗಿ ದಾಖಲೆ ಬಿಡುಗಡೆಯ ಅಗತ್ಯ ಇಲ್ಲ. ಈಗ ನಾವು ದಾಖಲೆ ಬಿಡುಗಡೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಮುನಿರತ್ನರಿಗೆ ತಿರುಪತಿ ಮೇಲೆ ನಂಬಿಕೆ ಇದೆ. ನನ್ನ ಹತ್ತಿರ ಕೂಡ ತಿರುಪತಿ ಮೇಲೆ ನಂಬಿಕೆ ಇರೋ ಬಗ್ಗೆ ಹೇಳಿದ್ರು. ನಾನು ಪ್ರಮಾಣ ಮಾಡಲು ಸವಾಲು ಹಾಕಿಲ್ಲ. ಅವರೇ ಕರೆದಿದ್ದು. ಮುನಿರತ್ನ ಐಡಿ ಕಾರ್ಡ್ ಸಂಗ್ರಹ ಮಾಡಿದ್ದರ ಬಗ್ಗೆ ಹೇಳಲಿ. ಹೈಕೋರ್ಟ್ನಲ್ಲಿ ಐಡಿ ಪ್ರಕರಣ ವಜಾ ಆಗಿಲ್ಲ. ವಜಾ ಆಗಿರೋದು ಎರಡನೇ ಸ್ಥಾನ ಬಂದಿರುವ ತಮಗೆ ವಿಜಯಿ ಮಾಡಿ ಅನ್ನುವ ಅರ್ಜಿ. ಮುನಿರತ್ನ ಮಾಧ್ಯಮದವರಿಗೇ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿನಯ್ ಕುಲಕರ್ಣಿಗೆ ತೊಂದ್ರೆ ಕೊಡಲು ಬಂಧನ ಮಾಡಲಾಗಿದೆ. ಆ ಭಾಗದಲ್ಲಿ ವಿನಯ್ ಪ್ರಭಾವಿ ವೀರಶೈವ ನಾಯಕ. ವಿನಯ್ರಿಂದ ಸಮಸ್ಯೆ ಆಗುತ್ತೆ ಅಂತ ದುರುದ್ದೇಶದಿಂದ ಬಂಧಿಸಲಾಗಿದೆ. ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ. ಆರೋಪ ಮುಕ್ತರಾಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾನೂನುಗಳ ಜಾರಿಗೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರದ್ದೇ ಸರ್ಕಾರ ಇದೆ. ಯಾವ ಕಾನೂನಾದ್ರೂ ತರಲಿ. ಯಾರು ಬೇಡ ಅಂತಾರೆ. ಜನಕ್ಕೆ ಬೇಕಾಗಿರೋದನ್ನ ಈ ಸರ್ಕಾರ ಮಾಡಲ್ಲ. ಯಾವುದು ಜನಕ್ಕೆ ಬೇಡವೋ ಅದನ್ನೇ ಈ ಸರ್ಕಾರ ತರೋದು ಎಂದು ಕಿಡಿಕಾರಿದರು.