ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಎರಡನೇ ದಿನದ ಕಾರ್ಯಾಗಾರ ಮುಂದುವರಿಯಿತು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.
ಶಿಕ್ಷಣದಲ್ಲಿ ಪಠ್ಯ ಹಾಗೂ ರಚನಾತ್ಮಕ ಸುಧಾರಣೆ ಎಂಬ ವಿಚಾರವಾಗಿ ಕಾರ್ಯಾಗಾರ ನಡೆಸಲಾಯಿತು. ಈ ವೇಳೆ, ಮಾತಾನಾಡಿದ ಸಚಿವ ಸುರೇಶ್ ಕುಮಾರ್, ರಾಷ್ಟ್ರೀಯ ಶಿಕ್ಷಣ ರಚನಾತ್ಮಕ ನೀತಿಯಲ್ಲಿ, ಬಹುಮುಖ್ಯವಾಗಿ ಜ್ಞಾನದ ಕೌಶಲ್ಯ, ಸಾಮಾಜಿಕ ಕೌಶಲ್ಯ ಹಾಗೂ ತರ್ಕಬದ್ಧ ಕೌಶಲ್ಯಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಕಾಯ್ದುಕೊಂಡಿರುವುದು ಈ ನೀತಿಯ ವಿಶೇಷ ಎಂದು ತಿಳಿಸಿದರು.
ಈ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಇಚ್ಛೆಯಂತೆ ವಸ್ತು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ವಿವಿಧ ಭಾಷೆಗಳನ್ನು ಪಠ್ಯಕ್ರಮದಲ್ಲಿ ಗುರುತಿಸಿದ್ದು, ಪ್ರಾದೇಶಿಕ ಭಾಷೆಗೆ ಹೆಚ್ಚಿನ ಮಹತ್ವ ಕೊಟ್ಟಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಇದೊಂದು ವಿಸ್ತಾರವಾದ ನೀತಿಯಾಗಿದ್ದು, ವಿವಿಧ ದೃಷ್ಟಿಕೋನಗಳ ಮೂಲಕ ಶಿಕ್ಷಣವನ್ನು ಅರ್ಥೈಸಿಕೊಂಡು ಸುಸ್ಥಿರ ಅಭಿವೃದ್ಧಿ ಉದ್ದೇಶಗಳನ್ನು ಒಳಗೊಂಡಿದೆ. 2030 ರವರ ಒಳಗೆ ಈ ನೀತಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದರು. ಬಹುಮುಖ್ಯವಾಗಿ ಹೊಸ ಶಿಕ್ಷಣ ನೀತಿಯಿಂದ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.
ಪ್ರೊ. ವೇಣುಗೋಪಾಲ್ ಮಾತನಾಡಿ, ಈ ಶಿಕ್ಷಣ ನೀತಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಹಾಗೂ ಗುಣಮಟ್ಟದ ಪಠ್ಯಕ್ರಮ, ಬೋಧನಾ ಕ್ರಮ ಹಾಗೂ ಬಹು ವಿಷಯ ವಿಶ್ವವಿದ್ಯಾಲಯಗಳ, ಸ್ವಾಯುತ್ತತೆ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಬಗ್ಗೆ ಸವಿವರವಾಗಿ ತಿಳಿಸುತ್ತ ಅವುಗಳ ಅನುಷ್ಠಾನಗಳ ಸಾಧಕ - ಬಾಧಕಗಳ ಬಗ್ಗೆ ವಿವರ ನೀಡಿದರು.
ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸೂರಪ್ಪ ಮಾತನಾಡಿ, ಭಾರತ ಸರ್ಕಾರ ಈ ಹೊಸ ಶಿಕ್ಷಣ ನೀತಿಯನ್ನು ಹಲವಾರು ಸಂಶೋಧನೆಗಳು ಹಾಗೂ ಚರ್ಚೆಯನ್ನು ನಡೆಸಿ ರೂಪಿಸಿದೆ. ಕೊಠಾರಿ, ಯಶ್ಪಾಲ್, ಸ್ಯಾಮ್ ಪಿತ್ರೋಡಾ ಹಾಗೂ ಇನ್ನಿತರರ ವರದಿ ಶಿಕ್ಷಣದ ಬಗ್ಗೆ ನೀಡಿದ್ದಾದರೂ, ಈ ಹೊಸ ಶಿಕ್ಷಣ ನೀತಿ ಹಳೆ ನೀತಿಗಿಂತ ಸಮಗ್ರವಾಗಿ ಎಲ್ಲ ವಸ್ತು ವಿಚಾರಗಳನ್ನು ಸೇರಿಸಿದೆ. ವಿವಿಧ ಪಠ್ಯವಸ್ತು ವಿಷಯಗಳ ವಿಲೀನ ಮಾಡಿದ್ದು, ವಿಶೇಷವಾಗಿ ಉನ್ನತ ಶಿಕ್ಷಣದ ಸ್ವಾಯತ್ತತೆಯನ್ನು ನೀಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯ ಅರ್ಥಪೂರ್ಣತೆಯನ್ನು ಕ್ರಮಬದ್ಧವಾದ ಅನುಷ್ಠಾನದಿಂದ ಮಾತ್ರ ಕಂಡುಕೊಳ್ಳಬಹುದು. ಮಾಹಿತಿಯನ್ನು ಜ್ಞಾನವನ್ನಾಗಿ ಬದಲಾಯಿಸುವ ಅವಕಾಶ ನೀಡಬೇಕು ಹಾಗೂ ಶೈಕ್ಷಣಿಕ ಮಂಡಳಿ ಹಾಗೂ ಅಧ್ಯಾಪಕ ವೃಂದದ ಅವರೆಲ್ಲರೂ ಸೇರಿ ರಚನಾತ್ಮಕ ಸುಧಾರಣೆಯನ್ನು ಹೊಸ ಶಿಕ್ಷಣ ಪದ್ಧತಿಯಿಂದ ತರಬೇಕು ಎಂದು ತಿಳಿಸಿದರು.