ಬೆಂಗಳೂರು: ಕಾಂಗ್ರೆಸ್ ಶಾಸಕರು ಯಶವಂತಪುರ ಸಮೀಪದ ತಾಜ್ ವಿವಾಂತ ಖಾಸಗಿ ಹೋಟೆಲ್ ತಲುಪಿದ್ದು, ಇನ್ನೆರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಇನ್ನು ಬೆಂಗಳೂರು ನಗರದ ಒಳಭಾಗದಲ್ಲಿ ಈ ಹೋಟೆಲ್ ಇರುವ ಕಾರಣಕ್ಕೆ ಎಲ್ಲಾ ಶಾಸಕರು ತಮ್ಮದೇ ಖಾಸಗಿ ವಾಹನದಲ್ಲಿ ತೆರಳಿದ್ದಾರೆ. ಸೋಮವಾರ ಇವರನ್ನ ಒಟ್ಟಾಗಿಯೇ ವಾಹನದಲ್ಲಿ ವಾಪಸ್ ವಿಧಾನಸೌಧಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ. ಸೋಮವಾರದವರೆಗೆ ಕೈ ಶಾಸಕರಿಗೆ ಇಲ್ಲಿಯೇ ವಾಸ್ತವ್ಯ ವ್ಯವಸ್ತೆ ಮಾಡಲಾಗಿದ್ದು, ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್ ಕಮಲಕ್ಕೆ ತುತ್ತಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೋಟೆಲ್ಗೆ ಆಗಮಿಸಲು ನಿರಾಕರಿಸಿದರು. ತಾವು ಯಾವುದೇ ಹೋಟೆಲ್ ಅಥವಾ ರೆಸಾರ್ಟ್ಗೆ ಬರುವುದಿಲ್ಲ. ಅಗತ್ಯ ಬಂದಾಗ ಪಕ್ಷದ ಪರ ಮತ ಚಲಾಯಿಸಲು ಬರುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೋಟೆಲ್ಗೆ ಆಗಮಿಸಿ ಕೆಲಕಾಲ ಇದ್ದು ನಂತರ ವಾಪಸ್ ತೆರಳಿದ್ದಾರೆ.
ಸಚಿವ ರಾಜಶೇಖರ್ ಪಾಟೀಲ್, ಶಾಸಕಿ ವಿನಿಶಾ ನಿರೋ ಅವರೊಂದಿಗೆ ಆಗಮಿಸಿದ್ದರು.ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ಆನೇಕಲ್ ಶಿವಣ್ಣ, ಅಫ್ಜಲಪುರ ಶಾಸಕ ಎಂ.ವೈ. ಪಾಟೀಲ್ ಮತ್ತಿತರರು ಹೋಟೆಲ್ ತಲುಪಿದ್ದಾರೆ.