ಯಲಹಂಕ : ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮತ್ತು ಕುಳ್ಳದೇವರಾಜು ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಹಿನ್ನೆಲೆ ನಗರದ ಪೊಲೀಸ್ ಠಾಣೆಗೆ ಗೋಪಾಲಕೃಷ್ಣ ಹಾಜರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಳ್ಳದೇವರಾಜ್ ನೀಡಿದ ಕ್ಷಮಾಪಣೆ ಪತ್ರ ಮತ್ತು ಸಂಚು ನಡೆಸಿದ ವಿಡಿಯೋ ಇರುವ ಪೆನ್ ಡ್ರೈವ್ ಅನ್ನು ಪೊಲೀಸರಿಗೆ ವಿಶ್ವನಾಥ್ ನೀಡಿದ್ದಾರೆ.
30 ನಿಮಿಷಗಳ ವಿಡಿಯೋವನ್ನು ಪರಿಶೀಲನೆ ನಡೆಸಿರುವ ಪೊಲೀಸರು, ಇಂದು ವಿಚಾರಣೆಗಾಗಿ ಗೋಪಾಲಕೃಷ್ಣರನ್ನು ರಾಜಾನುಕುಂಟೆ ಪೊಲೀಸ್ ಠಾಣೆಗೆ ಕರೆದಿದ್ದರು. ಅದರಂತೆ ಬೆಳಿಗ್ಗೆ 9 ಗಂಟೆಗೆ ಗೋಪಾಲಕೃಷ್ಣ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಓದಿ: ಪತ್ನಿಯೊಂದಿಗೆ ಜಗಳ : 11 ತಿಂಗಳ ಮಗುವಿಗೆ ವಿದ್ಯುತ್ ಶಾಕ್ ನೀಡಿ ಕೊಂದ ಪಾಪಿ ತಂದೆ
ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ವಿಡಿಯೋ ನೋಡಿರುವ ಪೊಲೀಸರು ಪ್ರಶ್ನಾವಳಿಯನ್ನ ಸಿದ್ದಪಡಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿಯಾಗಿರುವ ಗೋಪಾಲಕೃಷ್ಣರನ್ನ ಸುದೀರ್ಘ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಶಾಸಕ ವಿಶ್ವನಾಥ ದೂರು ನೀಡಿದ ನಂತರ ನಾಪತ್ತೆಯಾಗಿದ್ದ ಗೋಪಾಲಕೃಷ್ಣ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನನ್ನು ಪಡೆದಿದ್ದಾರೆ. ಈಗಾಗಲೇ ಕುಳ್ಳದೇವರಾಜ್ ಹೇಳಿಕೆಯನ್ನ ಪೊಲೀಸರು ದಾಖಲು ಮಾಡಿದ್ದಾರೆ.