ಹಾಸನ: 22 ಜನ ಅಮಾಯಕ ಬಡ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಿದ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೂರೈಕೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶಿಲ್ದಾರ್ ಸಂತೋಷ್ ಮುಖಾಂತರ ಸಿಎಂ ಯಡಿಯ್ಯೂರಪ್ಪಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ವೇಳೆ ಕರವೇ ತಾಲೂಕು ಅಧ್ಯಕ್ಷ ಹೇಮಂತ ಕುಮಾರ್ ಮಾತನಾಡಿ, 22 ಜನ ಬಡ ಕೂಲಿಕಾರ್ಮಿಕ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಲಾಗಿದೆ. ಅವರ ದುಡಿಮೆ ಹಾಳಾಗಿದ್ದು, ಅವರನ್ನೇ ನಂಬಿದ್ದ ಬಡ ಕುಟುಂಬಸ್ಥರ ಜೀವನವನ್ನು ಕತ್ತಲಾಗಿಸಿದ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೂರೈಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಅಷ್ಟೇ ಅಲ್ಲದೆ, ಈ ವಿಚಾರವಾಗಿ ನ್ಯಾಯ ಕೇಳಲು ಹೋದ ಕರವೇ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.