ಬೆಂಗಳೂರು: ರಾಜಾಜಿನಗರದ ವಿವಿಧ ಆಸ್ಪತ್ರೆಗಳಲ್ಲಿಂದು ಕೊರೊನಾ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಚಾಲನೆ ನೀಡಿದರು.
ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಮಾಕ್ಷಿ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕಾ ಕಾರ್ಯಕ್ರಮಗಳಿಗೆ ಸಚಿವರು ಚಾಲನೆ ನೀಡಿದ ಬಳಿಕ ಮಾತನಾಡಿದರು. ಕೋವಿಡ್ ಮಹಾಮಾರಿಯಂತಹ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲು ತಮ್ಮ ಮನೆ ಮಠ ತೊರೆದು ಹೋರಾಟ ನಡೆಸಿದ ವೈದ್ಯರು, ದಾದಿಯರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸ್ತರದ ನೌಕರರ ಶ್ರಮ ಇತಿಹಾಸದಲ್ಲಿ ದಾಖಲಾಗುವಂತಹುದಾಗಿದೆ. ಅಂತಹ ಸ್ಮರಣೀಯ ಕಾರ್ಯ ನಿಮ್ಮಿಂದಾಗಿದೆ. ನೀವೆಲ್ಲರೂ ಪ್ರಾತಃಸ್ಮರಣೀಯರಾಗಿದ್ದೀರಿ ಎಂದು ಕೋವಿಡ್ ವಾರಿಯರ್ಸ್ ಸೇವೆಯನ್ನು ಶ್ಲಾಘಿಸಿದರು.
ಕೊರೊನಾ ಸೋಂಕು ವಿಶ್ವದ ಎಲ್ಲರ ಜೀವನದ ಮೇಲೂ ಒಂದಲ್ಲ ಒಂದು ರೀತಿಯ ಪರಿಣಾಮವನ್ನುಂಟು ಮಾಡಿದೆಯಾದರೂ ಆರೋಗ್ಯ ಕಾರ್ಯಕರ್ತರು, ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನೂ ಲೆಕ್ಕಿಸದೇ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡು ಸೇವೆ ಮಾಡಿರುವುದನ್ನು ಯಾರೂ ಸಹ ಮರೆಯಲಾಗಲ್ಲ. ಹಾಗೆಯೇ ಲಸಿಕೆ ಪಡೆಯುವ ಈ ಸಂದರ್ಭದಲ್ಲೂ ಆರೋಗ್ಯ ಕಾರ್ಯಕರ್ತರೇ ಮೊದಲಿಗರಾಗಿ ಲಸಿಕೆ ಪಡೆದು ರಾಷ್ಟ್ರದ ಪ್ರಜೆಗಳಿಗೆ ಲಸಿಕೆ ಪಡೆಯಲು ಪ್ರೇರಣಾದಾಯಿಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಕಡಿಮೆ ಅವಧಿಯಲ್ಲಿ ಹಗಲಿರುಳು ಶ್ರಮಿಸಿ ವ್ಯಾಕ್ಸಿನ್ ಸಂಶೋಧಿಸಿದ ವಿಜ್ಞಾನಿಗಳು ಒಂದು ರೀತಿಯಲ್ಲಿ ತಪಸ್ವಿಗಳೇ ಆಗಿದ್ದಾರೆ. ಕೊರೊನಾ ವಾರಿಯರ್ಸ್ ದುಡಿಯುತ್ತಿರುವವರಿಗೆ ಮತ್ತು ಲಸಿಕೆ ಸಂಶೋಧಿಸಿದ ವಿಜ್ಞಾನಿಗಳ ತಂಡಕ್ಕೆ ಇಡೀ ರಾಷ್ಟ್ರದ ಪ್ರಜೆಗಳ ಕೃತಜ್ಞತೆಗಳು ಸಲ್ಲುತ್ತವೆ ಎಂದರು.
ಲಸಿಕೆ ನೀಡಿದ ನಂತರ ಕೆಲ ಹೊತ್ತು ಆಸ್ಪತ್ರೆಗಳಲ್ಲೇ ಇದ್ದು, ಲಸಿಕೆ ಪಡೆದವರ ಅಭಿಪ್ರಾಯಗಳನ್ನು ಆಲಿಸಿದರು. ಗಂಟಲು ದ್ರವ ಸಂಗ್ರಹಕಾರರು, ಪ್ರಯೋಗಾಲಯ ತಂತ್ರಜ್ಞರು, ವಾರ್ಡ್ ಆರೋಗ್ಯ ಪರಿವೀಕ್ಷಕರು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನೇರವಾಗಿ ತೊಡಗಿಸಿಕೊಂಡ ಸಿಬ್ಬಂದಿ ಲಸಿಕೆಗಳನ್ನ ಪಡೆದರು.