ಬೆಂಗಳೂರು: ಬೆಳಗಾವಿಯಿಂದ ಬೆಂಗಳೂರಿಗೆ ನಾನು ಬರುವಾಗ ರೈಲ್ವೆ ಬ್ರಿಡ್ಜ್ ಕೆಳಗೆ ಹೋದಾಗ ಆ ಕೊಳಚೆ ನೀರು ನಮ್ಮ ಮೇಲೆ ಬಿದ್ದಿತ್ತು. ನಮಗೂ ಆ ಅನುಭವವಾಗಿದೆ ಎಂದು ಸಚಿವ ಸುರೇಶ್ ಚನ್ನಬಸಪ್ಪ ಅಂಗಡಿ ಹೇಳಿದರು.
ಬೆಂಗಳೂರಿನ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಉದ್ಘಾಟನೆ ವೇಳೆ ಮೇಯರ್ ಗಂಗಾಂಬಿಕೆಯವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಮಗಾದ ಅನುಭವವನ್ನು ಹೇಳಿಕೊಂಡರು. ನಗರದಲ್ಲಿರುವ ರೈಲ್ವೆ ಕೆಳ ಸೇತುವೆ ( ಆರ್ಯುಬಿ) ಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಬಹಳ ತೊಂದರೆ ಆಗುತ್ತಿರುವುದಾಗಿ ಮೇಯರ್ ಸಚಿವರ ಗಮನಕ್ಕೆ ತಂದರು. ಸಾಕಷ್ಟು ಬಾರಿ ರೈಲ್ವೆ ಕೆಳ ಸೇತುವೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ತ್ಯಾಜ್ಯದ ನೀರು ಬೀಳುತ್ತಿದೆ. ಇದರಿಂದ ಕೆಲವೊಮ್ಮೆ ತಿಳಿಯದೇ ಜನರು ಸಡನ್ ಬ್ರೇಕ್ ಹಾಕಿ ಹಿಂದಿನ ಸವಾರರಿಗೆ ಅಪಘಾತ ಮಾಡಿದ್ದೂ ಇದೆ. ಈ ಬಗ್ಗೆ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ಡಿ.ಜಿ. ಮಲ್ಯ ಅವರನ್ನು ಕಳೆದ 18ರಂದು ಖುದ್ದು ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದು, 19ರಂದು ವಿವರವಾದ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.
ಇದಕ್ಕೆ ಸ್ಪಂದಿಸಿದ ರೈಲ್ವೆ ರಾಜ್ಯ ಸಚಿವರು, ಈ ರೀತಿಯ ತೊಂದರೆಯನ್ನು ನಾನೂ ಸಹ ಅನುಭವಿಸಿದ್ದೇನೆ. ಇದರಿಂದಾಗಿ ಎಲ್ಲರಿಗೂ ಇರಿಸು ಮುರಿಸಾಗುತ್ತದೆ. ನಗರದಲ್ಲಿರುವ ಎಲ್ಲ ಆರ್ಯುಬಿಗಳ ನಿರ್ವಹಣೆಯನ್ನು ಉನ್ನತೀಕರಿಸಿ, ಆರ್ಯುಬಿ ಕೆಳಗಡೆ ಯಾವುದೇ ರೀತಿಯ ಮಲಿನ ನೀರು ಸೋರಿಕೆ ಆಗದಂತೆ ಕ್ರಮ ವಹಿಸಲಾಗುವುದು. ಒಂದು ತಿಂಗಳೊಳಗೆ ಇದನ್ನ ಸರಿಪಡಿಸುವಂತೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ರಿಗೆ ಸೂಚಿಸಿದರು.