ಬೆಂಗಳೂರು: ಜನವರಿ 1ರಿಂದ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವುದು ಸಂತಸದ ವಿಚಾರ. ಇನ್ನು ರಾಜ್ಯ ಸರ್ಕಾರ ಸಹ ಅಗತ್ಯ ಕ್ರಮ ಕೈಗೊಂಡೇ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ನಾವೆಲ್ಲರೂ ಸೇರಿ ಈ ಹೆಜ್ಜೆಯನ್ನು ಇಡಲೇಬೇಕಾದ ಅನಿವಾರ್ಯತೆ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಎರಡೂ ಕೈ ಸೇರಿದರೆ ಹೇಗೆ ಚಪ್ಪಾಳೆಯಾಗುತ್ತದೋ, ಹಾಗೆಯೇ ಸರ್ಕಾರದ ಜೊತೆ ಪಾಲಕರೂ ಸಹಕಾರ ನೀಡಬೇಕಾಗುತ್ತದೆ. ಕೋವಿಡ್ -19ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸದ್ಯ ಆದೇಶದ ಪ್ರಕಾರ ಜನವರಿ 1 ರಿಂದ ತರಗತಿಗಳು ಆರಂಭವಾಗುತ್ತಿವೆ. ಮೊದಲಿಗೆ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತಿದೆ. ಆದರೆ, ಇದು ಸಹ ಕಡ್ಡಾಯವಲ್ಲ ಎಂದರು.
ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್ ಲೈನ್, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸ ಮಾಡಬಹುದಾಗಿದೆ. ಇನ್ನು 6 ರಿಂದ 9ನೇ ತರಗತಿ ವರೆಗೆ ವಿದ್ಯಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದರೆ, ಈ ತರಗತಿಗಳ ಮಕ್ಕಳು ವಾರಕ್ಕೆ 2 ದಿನ ಶಾಲೆಗಳಿಗೆ ಹಾಜರಾಗಿ ಪಾಠ ಕೇಳಬಹುದಾಗಿದೆ. ಇಲ್ಲಿ ಎಲ್ಲರೂ ಕೋವಿಡ್ -19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾರಿಗೇ ಸಹ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಅಂತಹವರನ್ನು ಶಾಲಾ - ಕಾಲೇಜಿಗೆ ಕಳುಹಿಸದಿರುವುದೇ ಒಳಿತು. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಜಾಗ್ರತೆ ಅತಿ ಅಗತ್ಯ ಎಂದಿದ್ದಾರೆ.
ಓದಿ...ಮಕ್ಕಳೇ ಶಾಲೆಗೆ ಹೋಗಲು ರೆಡಿಯಾಗಿ: ತರಗತಿ ಪುನಾರಂಭಕ್ಕೆ ದಿನಾಂಕ ಘೋಷಿಸಿದ ಸರ್ಕಾರ
ಇನ್ನು ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕಿನ ಲಕ್ಷಣಗಳಿಲ್ಲ ಎಂದು ದೃಢೀಕರಿಸಬೇಕು. ಒಟ್ಟಿನಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಹೊಣೆ ಸರ್ಕಾರದ ಜೊತೆಗೆ ಶಿಕ್ಷಕರು, ಪಾಲಕರದ್ದೂ ಆಗಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.