ಬೆಂಗಳೂರು: ನೀರಾವರಿ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರದ ಜೊತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ರಾಜಕೀಯ ಕಾರಣದ ಭೇಟಿ ಇದಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನವದೆಹಲಿ ಭೇಟಿ ಕೇವಲ ರೊಟೀನ್ ಭೇಟಿಯಾಗಿದೆ. ರಾಜ್ಯದ ಅಭಿವೃದ್ಧಿ ವಿಚಾರ, ನೀರಾವರಿ ಯೋಜನೆಗಳು ಸೇರಿದಂತೆ ಇತರ ವಿಚಾರಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಲಿದ್ದಾರೆ. ಇದು ಕೇವಲ ಅಭಿವೃದ್ಧಿ ವಿಚಾರಕ್ಕೆ ಮಾತ್ರ ಸೀಮಿತವಾದ ಪ್ರವಾಸವಾಗಿದ್ದು, ಯಾವುದೇ ರಾಜಕೀಯ ಭೇಟಿ ಅಲ್ಲ ಎಂದರು.
ಅನ್ ಲಾಕ್ 4.O ಬಗ್ಗೆ ಇಂದಿನ ಸಭೆಯಲ್ಲಿ ಏನೂ ಚರ್ಚೆ ನಡೆದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಿಂದ ವಾಪಸ್ ಆದ ನಂತರ ಚರ್ಚೆ ನಡೆಸು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಆಕ್ಸಿಜನ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪಿಎಂ ಸೂಚನೆ
ಕಳೆದ ಬಾರಿ ಆಕ್ಸಿಜನ್ ಸಮಸ್ಯೆ ಆಗಿತ್ತು. ಈ ಸಲ ಆಕ್ಸಿಜನ್ ಸಮಸ್ಯೆ ಆಗದ ರೀತಿ ಕ್ರಮಕ್ಕೆ ಪಿಎಂ ಸೂಚನೆ ಕೊಟ್ಟಿದ್ದಾರೆ. ಈಗ 50 ಯುನಿಟ್ ಆಕ್ಸಿಜನ್ ಉತ್ಪಾದನೆ ಮಾಡಲಾಗ್ತಿದೆ. ಅದನ್ನು 200 ಯೂನಿಟ್ ಮಾಡಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆದಷ್ಟು ಬೇಗ ಕಾರ್ಯಾರಂಭ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಮೋದಿ ತಿಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ಕೇಂದ್ರದಿಂದ ಕೊಡುವ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರ,ಕೇರಳದಲ್ಲಿ ಮತ್ತೆ ಕೊರೊನಾಂತಕ:
ಮಹಾರಾಷ್ಟ್ರ, ಕೇರಳದಲ್ಲಿ ಆತಂಕದ ವಾತಾವರಣ ಇದೆ. ಪಾಸಿಡಿವಿಟಿದರ ಹೆಚ್ಚಾಗುತ್ತಿದೆ ಈ ಬಗ್ಗೆ ನೆರೆ ರಾಜ್ಯ ಕರ್ನಾಟಕವೂ ಗಮನ ಕೊಡಬೇಕು ಎಂದು ಹೇಳಿದ್ದಾರೆ. ಯಾವುದೇ ರಾಜ್ಯದಲ್ಲಿ ನಿರಂತರವಾಗಿ ಕೊರೊನಾ ಹರಡುವಿಕೆ ಪ್ರಮಾಣ ಒಂದೇ ರೀತಿ ಇದ್ದರೆ ವೈರಸ್ ಬದಲಾಗುತ್ತಾ ಹೋಗಲಿದೆ ಹಾಗಾಗಿ ಅದು ಕಡಿಮೆ ಆಗಬೇಕು, ಮಹಾರಾಷ್ಟ್ರ, ಕೇರಳದಲ್ಲಿ ಇದು ಆಘಾತಕಾರಿ ಪರಿಸ್ಥಿತಿಯಲ್ಲಿದೆ. ಅದರ ಕಡೆ ಹೆಚ್ಚಿನ ಗಮನ ಹರಿಸಿ ಎಂದು ಪ್ರಧಾನಿ ಕರ್ನಾಟಕಕ್ಕೆ ಸೂಚಿಸಿದ್ದಾರೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.
ಇದನ್ನೂ ಓದಿ:ಸಿಎಂ ಜತೆ ಪುತ್ರ ವಿಜಯೇಂದ್ರ ಕೂಡ ದೆಹಲಿಗೆ ಪ್ರಯಾಣ: ರಾಜ್ಯ ರಾಜಕೀಯದಲ್ಲಿ ಬದಲಾವಣೆ ಪರ್ವ?
ಕೊರೊನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಲ್ಲವೂ ಸೇರಿ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದಾರೆ. ಇದರಿಂದ ರಾಜ್ಯಕ್ಕೆ ಹೊಸ ಭರವಸೆ ಸಿಕ್ಕಿದೆ. ಕೊರೊನಾ ನಿಯಂತ್ರಣಕ್ಕೆ ಹಣದ ಸಹಾಯ, ಲಸಿಕೆ, ಆಮ್ಲಜನಕವನ್ನು ಕಾಲ ಕಾಲಕ್ಕೆ ಪೂರೈಕೆ ಮಾಡುವ ಭರವಸೆ ಸಿಕ್ಕಿದೆ. ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಸಲಹೆ ಸೂಚನೆಯನ್ನು ಮೋದಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಇದೇ ವೇಳೆ ನೀಡಿದರು.