ಬೆಂಗಳೂರು: ಕೇಂದ್ರ ಸರ್ಕಾರದ ಬಳಿ ಪ್ರಾಥಮಿಕವಾಗಿ 4 ಸಾವಿರ ಕೋಟಿ ರೂ. ವಿಶೇಷ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ 2018, 2019ರಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿದ್ದು, ಈ ಹಿನ್ನೆಲೆ ವಿಶೇಷ ಅನುದಾನ ಕೇಳಿದ್ದೇವೆ. ಪ್ರಧಾನಿ ವಿಡಿಯೋ ಕಾನ್ಫರೆನ್ಸ್ನಲ್ಲಿ ನಷ್ಟಕ್ಕೆ ರಾಜ್ಯದಿಂದ 4 ಸಾವಿರ ಕೋಟಿ ರೂ. ಪರಿಹಾರ ಕೇಳಲಾಗಿದೆ. ಜೊತೆಗೆ ಎಸ್ಡಿಆರ್ಎಫ್ ನಿಧಿಯಿಂದ ಮುಂಗಡವಾಗಿ 395 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.
ಸದ್ಯ 56 ತಾಲೂಕುಗಳಲ್ಲಿ ನೆರೆಹಾನಿ ಸಂಭವಿಸಿದ್ದು, 885 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. 3,500 ಕಿ.ಮೀ ರಸ್ತೆ ಹಾಳಾಗಿದ್ದು, 85 ಸಾವಿರ ಎಕರೆಯಲ್ಲಿನ ಬೆಳೆ, 3 ಸಾವಿರ ಮನೆಗಳು, 250 ಸೇತುವೆಗಳು ಮತ್ತು 392 ಕಟ್ಟಡಗಳು ಮಳೆಯಿಂದ ಹಾನಿಯಾಗೀಡಾಗಿವೆ ಎಂದು ಸಚಿವರು ವಿವರಿಸಿದರು.
ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಗಮನಕ್ಕೆ ತಂದಿದ್ದೇವೆ. ಕೇಂದ್ರ 4 ಡಿಫೆನ್ಸ್ ಹೆಲಿಕಾಪ್ಟರ್ಗಳನ್ನು ಮೀಸಲಿರಿಸಿದೆ. ರಾಜ್ಯದಲ್ಲಿ ಈಗಾಗಲೇ 4 ಎನ್ಡಿಆರ್ಎಫ್ ತಂಡ ಇದ್ದು, ಇದರ ಜೊತೆಗೆ 4 ಹೆಚ್ಚುವರಿ ಎನ್ಡಿಆರ್ಎಫ್ ತಂಡ ರಾಜ್ಯಕ್ಕೆ ಒದಗಿಸುವಂತೆ ಮನವಿ ಮಾಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ 876 ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ವಿಪತ್ತು ನಿರ್ವಹಣಾ ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಒಟ್ಟು 1,744 ಪರಿಹಾರ ಕೇಂದ್ರಗಳನ್ನು ತೆರೆಯಲಿದ್ದೇವೆ ಎಂದು ಮಾಹಿತಿ ನೀಡಿದರು.
ಕೃಷ್ಣ, ಕಾವೇರಿ ಕೊಳ್ಳಗಳಲ್ಲಿ ಭಾರೀ ಪ್ರವಾಹ ಆಗುತ್ತಿದೆ. ಮಹಾರಾಷ್ಟ್ರ ಜೊತೆ ಒಂದು ಸಭೆ ಆಗಿದೆ. ಸಚಿವ ರಮೇಶ್ ಜಾರಕಿಹೊಳಿ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಎಲ್ಲಾ ಡ್ಯಾಂಗಳ ಇಂಜಿನಿಯರ್ಗಳ ಸಂಪರ್ಕದಲ್ಲಿ ಇದ್ದೇವೆ. ಪ್ರವಾಹ ಕಡಿಮೆ ಮಾಡಲು ಅಹ್ಮದಾಬಾದ್ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಮೊದಲೇ ಪ್ರವಾಹ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಕೈಗೊಳ್ಳಲು ಅಂತಾರಾಜ್ಯ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸಂಯೋಜಿತ ಪ್ರವಾಹ ಮುನ್ಸೂಚನೆ ವ್ಯವಸ್ಥೆ ರೂಪಿಸಲು ಮನವಿ ಮಾಡಿರುವುದಾಗಿ ಸಚಿವ ಬೊಮ್ಮಾಯಿ ಹೇಳಿದರು.
ಇದರ ಜೊತೆಗೆ ಭೂಕುಸಿತ ಪ್ರದೇಶಗಳ ಮ್ಯಾಪಿಂಗ್ ಮಾಡುವಂತೆ ಮನವಿ ಮಾಡಿದ್ದೇವೆ. ಪ್ರವಾಹ ವೇಳೆ ಮಣ್ಣು ಸವಕಳಿ ತಡೆಗೂ ನೆರವು ಮತ್ತು ಯೋಜನೆ ರೂಪಿಸಲು ಮನವಿ ಮಾಡಿದ್ದೇವೆ ಎಂದರು.