ಬೆಂಗಳೂರು: ಪಾದರಾಯನಪುರದ ಗಲಭೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಲ್ಲಿ ನಗರದ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದರು.
ಪಾದರಾಯನಪುರ ಘಟನೆಯ ಬಗ್ಗೆ ಮುಸ್ಲಿಂ ಮುಖಂಡರಿಂದ ಘಟನೆಯ ಮಾಹಿತಿಯನ್ನು ಡಿಕೆಶಿ ಪಡೆದಿದ್ದಾರೆ. ನಂತರ ಮುಸ್ಲಿಂ ಮುಖಂಡರಿಗೆ ಡಿಕೆಶಿ ಸೂಚನೆ ನೀಡಿದ್ದು, ಈಗಾಗಲೇ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ. ಅದನ್ನ ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಕೊರೊನಾ ಸೋಂಕಿನಿಂದ ಜಗತ್ತೇ ತಲ್ಲಣಗೊಂಡಿದೆ. ರಾಜ್ಯದಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನ ತಡೆಗಟ್ಟಲು ಸರ್ಕಾರಕ್ಕೆ ಸಾಥ್ ನೀಡಬೇಕು ಎಂದರು.
ರಾಜಕಾರಣ ಮಾಡುವ ಸಮಯ ಇದಲ್ಲ, ದಯವಿಟ್ಟು ನೀವೆಲ್ಲರೂ ಅರ್ಥ ಮಾಡಿಕೊಳ್ಳಿ, ನಿಮ್ಮ ಸಮುದಾಯಕ್ಕೆ ಸ್ಪಷ್ಟ ಸಂದೇಶವನ್ನ ನೀಡಿ, ಮಾಧ್ಯಮದವರ ಮುಂದೆ ಮಾತನಾಡುವಾಗ ಜವಾಬ್ದಾರಿಯಿರಲಿ ಎಂದು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.
ಸಣ್ಣ ಹೇಳಿಕೆ ದೊಡ್ಡ ತಿರುವು ಪಡೆದುಕೊಳ್ಳಬಹುದು. ಇದು ಪಕ್ಷದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಮಾಧ್ಯಮಗಳ ಮುಂದೆ ಅನಾವಶ್ಯಕವಾಗಿ ಹೋಗಬೇಡಿ. ಪೊಲೀಸರು, ಆರೋಗ್ಯ ಸಿಬ್ಬಂದಿ ಜೀವ ಉಳಿಸಲು ಹೋರಾಡುತ್ತಿದ್ದಾರೆ. ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಅಗತ್ಯವಾದ ಸಹಕಾರವನ್ನ ಜನರು ನೀಡಬೇಕೆಂದು ಡಿಕೆಶಿ ಕರೆ ನೀಡಿದ್ದಾರೆ.
ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವ ಸಿ. ಎಂ. ಇಬ್ರಾಹಿಂ, ಜಮೀರ್ ಅಹ್ಮದ್ ಖಾನ್, ಶಾಸಕರಾದ ಎನ್. ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ರೆಹಮಾನ್ ಖಾನ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಯೀದ್ ಅಹಮದ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.