ಬೆಂಗಳೂರು: ಆಚಾರ್ಯ ಶ್ರೀ ಆನಂದ್ ರಿಷಿಜಿ ಅವರ 120ನೇ ಜನ್ಮ ದಿನದ ಅಂಗವಾಗಿ ದೇಶದ ವಿವಿಧ ಭಾಗಗಳ 500ಕ್ಕೂ ಹೆಚ್ಚು ಜನರು ಕಳೆದ ಎಂಟು ದಿನಗಳಿಂದ (192 ಘಂಟೆಗಳು) ವಿಶ್ವ ಶಾಂತಿಗಾಗಿ ಉಪವಾಸ ಹಮ್ಮಿಕೊಂಡಿದ್ದು, ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಾಯ್ ಶ್ರೀ ಪ್ರವೀಣ್ ರಿಷಿಜಿ ಹಾಗೂ ಶ್ರೀ ತೀರ್ಥಶ್ರೀ ರಿಷಿಜಿ ಅವರ ಸಮ್ಮುಖದಲ್ಲಿ ಉಪವಾಸವನ್ನು ಅಂತ್ಯಗೊಳಿಸಲಾಯಿತು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಚಾರದ ಹಿನ್ನೆಲೆಯಲ್ಲಿ ಗುರುದೇವ್ ಪ್ರವೀಣ್ ರಿಷಿಜಿ ಅವರು ದೇಶಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇವರು ಪ್ರತಿ ವರ್ಷ ಸುಮಾರು 3000 ಕಿ.ಮೀ ಪ್ರಯಾಣಿಸುತ್ತಾರೆ. ಒಂದು ಸ್ಥಳದಲ್ಲಿ 4 ತಿಂಗಳಿಗಿಂತ ಜಾಸ್ತಿ ತಂಗುವುದಿಲ್ಲ. ಇವರ ನೇತೃತ್ವದಲ್ಲಿ ದೇಶಾದ್ಯಂತದ ಜನರು ಕಳೆದ ಒಂದು ವಾರದಿಂದ ವಿಶ್ವಶಾಂತಿಗಾಗಿ ಉಪವಾಸ ಕೈಗೊಂಡಿದ್ದಾರೆ. ಇದು ಅತ್ಯಂತ ಕಠಿಣ ಉಪವಾಸವಾಗಿದ್ದು, ಜನರು ದಿನದ ಸಂಜೆಯವರೆಗೆ ಬಿಸಿ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸುವುದಿಲ್ಲ.
ಗುರು ಆನಂದ ಚಾತುರ್ಮಾಸ ಸಮಿತಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಉಪವಾಸ ನಿರತರೆಲ್ಲರೂ ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗುರುದೇವ್ ಪ್ರವೀಣ್ ಜಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.