ಬೆಂಗಳೂರು: ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ದೈಹಿಕವಾಗಿ ಅರ್ಹತೆ ಇದ್ದರೂ ತಪ್ಪು ವರದಿ ನೀಡಿದ್ದ ಬೌರಿಂಗ್ ಆಸ್ಪತ್ರೆಯ ವರದಿಯನ್ನು ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರನನ್ನು ಮತ್ತೆ ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶಿಸಿದೆ.
ಇದೇ ವೇಳೆ, ತಪ್ಪು ವರದಿಗಳನ್ನು ನೀಡುವುದನ್ನು ತಪ್ಪಿಸಲು ಕೆಪಿಎಸ್ಸಿ ಮೂಲಕ ನಡೆಯುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ ನೀಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿಯನ್ನು ನೇಮಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿದೆ. ಹಾಸನದ ಬಿ. ಎನ್ ಶಿವನಂಜೇಗೌಡ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ಹಾಸನದ ಶಿವನಂಜೇಗೌಡ ಎಂಬುವರು 2019ರಲ್ಲಿ ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ದೇಹದಾರ್ಢ್ಯ ಪರೀಕ್ಷೆ ನಡೆಸಿದ್ದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಶಿವನಂಜೇಗೌಡರಿಗೆ ಬಣ್ಣದ ದೃಷ್ಟಿ ದೋಷವಿದೆ. ನಿಗದಿತ ಎತ್ತರಕ್ಕಿಂತ ಅರ್ಧ ಸೆ. ಮೀ ಕಡಿಮೆ ಇದ್ದಾರೆ ಎಂದು ಸರ್ಟಿಫಿಕೇಟ್ ನೀಡಿದ್ದರು. ಈ ಪ್ರಮಾಣ ಪತ್ರ ಪರಿಗಣಿಸಿ ಕೆಪಿಎಸ್ಸಿ ಶಿವನಂಜೇಗೌಡರ ಅರ್ಜಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಶಿವನಂಜೇಗೌಡ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿ ಕೂಡ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2022ರ ಏಪ್ರಿಲ್ 18ರಂದು ಶಿವನಂಜೇಗೌಡ ಅವರನ್ನು ಪರೀಕ್ಷಿಸಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಮಿಂಟೋ ಆಸ್ಪತ್ರೆಗೆ ಆದೇಶಿಸಿತ್ತು. ಮಿಂಟೋ ಆಸ್ಪತ್ರೆ ವೈದ್ಯರು ಪರೀಕ್ಷೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ ಶಿವನಂಜೇಗೌಡ ಅವರಿಗೆ ಬಣ್ಣದ ದೃಷ್ಟಿ ದೋಷವಿಲ್ಲ. ಹಾಗೆಯೇ, ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ನಿಗದಿ ಮಾಡಿರುವ ದೈಹಿಕ ಅರ್ಹತೆ ಹೊಂದಿದ್ದಾರೆ ಎಂದು ಪ್ರಮಾಣಿಕರಿಸಿತ್ತು.
ಮಿಂಟೋ ವರದಿ ಪರಿಗಣಿಸಿದ ಹೈಕೋರ್ಟ್, ಅರ್ಹತೆ ಇದ್ದರೂ ಬೌರಿಂಗ್ ಆಸ್ಪತ್ರೆಯು ವೈದ್ಯರ ಯಡವಟ್ಟಿನಿಂದಾಗಿ ಅರ್ಜಿದಾರರು ಹುದ್ದೆ ಕಳೆದುಕೊಂಡಿರುವುದು ದುರಾದೃಷ್ಟಕರ. ಹೀಗಾಗಿ, ಅರ್ಜಿದಾರರನ್ನು ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ಮತ್ತೆ ಪರಿಗಣಿಸಬೇಕು ಎಂದು ಕೆಪಿಎಸ್ಸಿಗೆ ಆದೇಶಿಸಿದೆ.
ಇದೇ ವೇಳೆ ಅರ್ಹತೆಯುಳ್ಳ ಅಭ್ಯರ್ಥಿಗಳು ಮುಂದೆ ಹೀಗೆ ವಂಚಿತರಾಗಬಾರದು. ಕೆಪಿಎಸ್ಸಿ ತನ್ನಿಚ್ಚೆಯಂತೆ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ನೀಡಬಾರದು. ಆದ್ದರಿಂದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿ ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಓದಿ: ಪಠ್ಯದಲ್ಲಿ ಸೇರಿಸಿದ್ದರೂ ನನ್ನ ಪಾಠ ಬೋಧಿಸಬೇಡಿ : ದೇವನೂರು ಮಹಾದೇವ ಆಕ್ರೋಶದ ನುಡಿ